ಬೆಂಗಳೂರು: ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ‘ಯಶಸ್ವಿನಿ’ ಯೋಜನೆಯಡಿ 200ಕ್ಕೂ ಅಧಿಕ ಚಿಕಿತ್ಸೆಗಳ ದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಯೋಜನೆಯಡಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಒಲವು ತೋರುತ್ತಿದ್ದು, ಆಸ್ಪತ್ರೆಗಳ ಜಾಲ ರಾಜ್ಯದಾದ್ಯಂತ ವಿಸ್ತರಣೆಯಾಗುತ್ತಿದೆ.
ಸಹಕಾರ ಇಲಾಖೆಯಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2022-23 ನೇ ಸಾಲಿಗೆ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಅವಲಂಭಿತ ಕುಟುಂಬ ವರ್ಗದವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು 2022-23 ನೇ ಸಾಲಿಗೆ 2022ರ ನವೆಂಬರ್, 01 ರಿಂದ ಮರು ಜಾರಿಗೊಳಿಸಿದೆ.
ಸರ್ಕಾರವು ಹಲವು ಚಿಕಿತ್ಸೆಗಳ ದರವನ್ನು ಪರಿಷ್ಕರಿಸಿ, ಶೇ 300ರವರೆಗೂ ದರ ಹೆಚ್ಚಳ ಮಾಡಿದೆ. ಪರಿಣಾಮ ಯೋಜನೆ ಪ್ರಾರಂಭವಾದಾಗ 370 ಇದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ, ಈಗ 600ರ ಗಡಿ ದಾಟಿದೆ. ಅಂಕಿ-ಅಂಶಗಳು 637 ಯೋಜನೆಯಡಿ ನೋಂದಾಯಿತ ನೆಟ್ವರ್ಕ್ ಆಸ್ಪತ್ರೆಗಳು 602 ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು 2,128 ಯೋಜನೆಯಡಿ ಲಭ್ಯವಾಗುವ ಚಿಕಿತ್ಸೆಗಳು 206 ದರ ಪರಿಷ್ಕರಣೆಗೆ ಒಳಗಾದ ಚಿಕಿತ್ಸೆಗಳು’ಯಶಸ್ವಿನಿ’ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ ₹ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ನೆಟ್ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಗ್ರಾಮೀಣ ಸಹಕಾರ ಸಂಘಗಳ/ ಸ್ವ-ಸಹಾಯ ಗುಂಪುಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ. 500 ಗಳ ವಂತಿಕೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.100 ಗಳನ್ನು ಪಾವತಿಸುವುದು. ಹಾಗೆಯೇ ನಗರ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000 ಗಳ ವಂತಿಕೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.200 ಗಳನ್ನು ಪಾವತಿಸಿ, ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ಹತ್ತಿರದ ಸಹಕಾರ ಸಂಘಗಳಿಗೆ ನೀಡಿ ಈ ಯೋಜನೆ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.