ಬೆಂಗಳೂರು: ವಾಲ್ಮೀಕಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಎಸ್ಟಿ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ರಾಜಿನಾಮೆ ಪಡೆಯದಿದ್ರೆ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಜೂನ್ 6 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಬಳಿಗೆ ನಿಯೋಗವನ್ನು ಕರೆದೊಯ್ಯುವುದಾಗಿ ಬಿಜೆಪಿ ಸೋಮವಾರ ಪ್ರಕಟಿಸಿದೆ.
ನಿಯೋಗದ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಹಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸುದ್ದಿಗಾರರಿಗೆ ತಿಳಿಸಿದರು. “ಹಣಕಾಸು ಇಲಾಖೆಯ ಗಮನಕ್ಕೆ ತರದೆ ಯಾವುದೇ ಸಚಿವರು ಅಥವಾ ಇಲಾಖೆ ಇಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಲು ಸಾಧ್ಯವಿಲ್ಲದ ಕಾರಣ ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ, ಸಚಿವರನ್ನು ವಜಾಗೊಳಿಸುವ ಬಗ್ಗೆ ಸರ್ಕಾರ ವಿಳಂಬ ಮಾಡುತ್ತಿದೆ” ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, “ಈ ಸರ್ಕಾರ ನಾಚಿಕೆಯಿಲ್ಲದೆ ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಚುನಾವಣಾ ಉದ್ದೇಶಕ್ಕೆ ತಿರುಗಿಸಿದೆ” ಎಂದು ಹೇಳಿದರು.
ಹಗರಣದ ಸ್ವರೂಪ ಮತ್ತು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಬರೆದ ಪತ್ರವು ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಚುನಾವಣೆಗೆ ತಿರುಗಿಸಲಾಗಿದೆ ಎಂದು ಊಹಿಸಲು ಸಾಕು ಎಂದು ಅಶೋಕ್ ಆರೋಪಿಸಿದರು. ಸಚಿವರು ಒಟ್ಟು ಮೊತ್ತದ ಕೇವಲ 10% ಲಾಭ ಪಡೆದಿರಬಹುದು, ಆದರೆ ಉಳಿದ 90% ಹಣವನ್ನು ಸಚಿವರು, ಸಿಎಂ ಮತ್ತು ಪಕ್ಷದ ಹೈಕಮಾಂಡ್ ಲೂಟಿ ಮಾಡಿದೆ ಎಂದು ಅವರು ಆರೋಪಿಸಿದರು