ಬೆಂಗಳೂರು: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಿ.ಸಿ.ಇ. ಪದ್ಧತಿಯನ್ವಯ ಕೈಗೊಳ್ಳಲಾಗಿರುವ ಆಂತರಿಕ ಮೌಲ್ಯಮಾಪನದ ಅಂಕಗಳ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ನೇಮಿಸಿ ಪರಿಶೀಲನೆ ನಡೆಸುವ ಬಗ್ಗೆ ಮಂಡಳಿಯಿಂದ ಆದೇಶವನ್ನು ಹೊರಡಿಸಲಾಗಿದೆ.
ಈ ನಡುವೆ ಆದೇಶದಲ್ಲಿ , ಸರ್ಕಾರದ ಆದೇಶ ಸಂಖ್ಯೆ: ಇಡಿ 156 ಮಾಹಿತಿ 2014 ದಿನಾಂಕ:26-06-2014 ಮತ್ತು ಸರ್ಕಾರದ ಆದೇಶ ಸಂಖ್ಯೆ:ಇಡಿ 295 ಮಾಹಿತಿ 2014 ದಿನಾಂಕ:09-01-2015 ರನ್ವಯ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ(ಸಿ.ಸಿ.ಇ) ಪದ್ಧತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಅನುಷ್ಟಾನಗೊಳಿಸಲಾಗಿರುತ್ತದೆ. ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ (ಸಿ.ಸಿ.ಇ ಪದ್ಧತಿಯಲ್ಲಿ ಅಳವಡಿಸಿರುವ ವಿಧಿವಿಧಾನಗಳನ್ನು ಕೆಳಕಂಡಂತೆ ವಿವರಿಸಲಾಗಿದೆ.
> ಶೈಕ್ಷಣಿಕ ವರ್ಷದಲ್ಲಿ ವಿಷಯವಾರು ಒಟ್ಟು 04 ರೂಪಣಾತ್ಮಕ ಮೌಲ್ಯಮಾಪನಗಳನ್ನು ನಡೆಸಬೇಕಾಗಿದ್ದು ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿ ಎರಡು ಚಟುವಟಿಕೆಗಳು ಮತ್ತು ಒಂದು ಕಿರುಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಒಟ್ಟಾರೆ 04 ರೂಪಣಾತ್ಮಕ ಮೌಲ್ಯಮಾಪನಗಳಿಗೆ 08 ಚಟುವಟಿಕೆಗಳು ಹಾಗೂ 04 ಕಿರುಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.
> ಪರೀಕ್ಷೆಯು ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷಾ ವಿಧಾನದಿಂದ ಕೂಡಿದ್ದು, ಅದರಲ್ಲಿ ಬಾಹ್ಯ ಪರೀಕ್ಷೆಗೆ ಶೇ:80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಶೇ:20 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಬಾಹ್ಯ ಹಾಗೂ ಆಂತರಿಕ ಅಂಕಗಳ ಹಂಚಿಕೆ ಈ ಕೆಳಗಿನಂತಿದೆ.
> ಪ್ರತಿಯೊಂದು ರೂಪಣಾತ್ಮಕ ಮೌಲ್ಯಮಾಪನಕ್ಕೆ 50 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಇದರಲ್ಲಿ 20 ಅಂಕಗಳಿಗೆ ಒಂದು ಕಿರುಪರೀಕ್ಷೆ(ಶಿಕ್ಷಕರ ನಿರ್ಧಾರದಂತೆ) ಹಾಗೂ 15 ಅಂಕಗಳಿಗೆ ಎರಡು ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಅದರಂತೆ ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಒಟ್ಟು ಅಂಕಗಳು 200 ಆಗಿರುತ್ತವೆ. ಈ ಅಂಕಗಳಿಗೆ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ಪರಿಮಾಣಾತ್ಮಕವಾಗಿ ಪ್ರಥಮ ಭಾಷೆಗೆ 25 ಅಂಕಗಳಿಗೂ, ಉಳಿದ 05 ವಿಷಯಗಳಲ್ಲಿ 20 ಅಂಕಗಳಿಗೆ ಪರಿವರ್ತಿಸಿ (ಲೆಕ್ಕಹಾಕಿ) ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು.
ಆಂತರಿಕ ಮೌಲ್ಯಮಾಪನದಲ್ಲಿ ನಡೆಸುವ ಕಿರುಪರೀಕ್ಷೆ ಹಾಗೂ ಚಟುವಟಿಕೆಗಳು ಸಿ.ಸಿ.ಇ. ಪದ್ಧತಿ ಆಧಾರವಾಗಿರಬೇಕು
> ಆಂತರಿಕ ಮೌಲ್ಯಮಾಪನದಲ್ಲಿನ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ.
> ವಿದ್ಯಾರ್ಥಿಗಳು ತೇರ್ಗಡೆಯಾಗಲು ಆಂತರಿಕ ಮೌಲ್ಯಮಾಪನದಲ್ಲಿ ಇಂತಿಷ್ಟೇ ಕನಿಷ್ಠ ಅಂಕಗಳನ್ನು ಪಡೆಯಬೇಕೆಂದು ನಿಯಮವಿರುವುದಿಲ್ಲ.
> ಅರ್ಧ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ರೂಪಣಾತ್ಮಕ ಮೌಲ್ಯಮಾಪನಕ್ಕೆ ಪರಿಗಣಿಸಬಾರದು.
ಆಂತರಿಕ ಮೌಲ್ಯಮಾಪನದಲ್ಲಿ ಶಿಕ್ಷಕರು ಲೋಪವೆಸಗಿರುವ ಬಗ್ಗೆ ಮಂಡಲಿಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದಲ್ಲಿ 25 ಕ್ಕೆ 25, 20ಕ್ಕೆ 20 ಅಂಕಗಳು ನೀಡಿದ್ದರೂ, ಮಂಡಲಿ ನಡೆಸುವ ಬಾಹ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ, ತಾಲ್ಲೂಕು ಹಂತದಲ್ಲಿ ತ್ರಿ-ಸದಸ್ಯ ಸಮಿತಿಯನ್ನು ರಚಿಸಿ, ಸದರಿ ಸಮಿತಿಯ ಸದಸ್ಯರು ಆಯಾ ತಾಲ್ಲೂಕಿನ ಪ್ರೌಢಶಾಲೆಗಳಿಗೆ ಭೇಟಿನೀಡಿ, ಶಾಲಾ ಹಂತದಲ್ಲಿ ವಿಷಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದಲ್ಲಿ ನೀಡಿರುವ ಅಂಕಗಳನ್ನು ಪರಿಶೀಲನಾ ಕಾರ್ಯ ಕೈಗೊಳ್ಳಲು ಜಿಲ್ಲಾ ಉಪನಿದೇಶಕರು(ಆಡಳಿತ) ರವರು ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದೆ.ತ್ರಿ-ಸದಸ್ಯ ಸಮಿತಿಯಲ್ಲಿ ವಿಷಯ ಪರಿಣತಿ ಹೊಂದಿರುವ ಒಬ್ಬರು ಸರ್ಕಾರಿ/ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಸರ್ಕಾರಿ/ಅನುದಾನಿತ ಶಾಲೆಯ ಒಬ್ಬರು ವಿಜ್ಞಾನ ಶಿಕ್ಷಕರು ಹಾಗೂ ಸರ್ಕಾರಿ/ಅನುದಾನಿತ ಶಾಲೆಯ ಒಬ್ಬರು ಕಲಾ/ಭಾಷಾ ಶಿಕ್ಷಕರನ್ನೊಳಗೊಂಡ ಸಮಿತಿಯನ್ನು ರಚಿಸುವುದು. (ಆಯಾ ತಾಲ್ಲೂಕಿನಲ್ಲಿರುವ ಪ್ರೌಢಶಾಲೆಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸಂಖ್ಯೆಯ ಸಮಿತಿಗಳನ್ನು ರಚಿಸುವುದು). ಸಮಿತಿಯ ಸದಸ್ಯರು ಶಾಲೆಗೆ ಭೇಟಿನೀಡಿ, ಉಲ್ಲೇಖಿತ ಸರ್ಕಾರಿ ಆದೇಶ ಮತ್ತು ಮಂಡಲಿಯ ಮಾರ್ಗಸೂಚಿಯಂತೆ ಸಿ.ಸಿ.ಇ. ಪದ್ಧತಿಯನ್ವಯ ಶಾಲಾ ಹಂತದಲ್ಲಿ ಕಿರುಪರೀಕ್ಷೆ ಮತ್ತು ಚಟುವಟಿಕೆಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ ಗುಣಮಟ್ಟವನ್ನಾಧರಿಸಿ ವಿಷಯವಾರು ಆಂತರಿಕ ಮೌಲ್ಯಮಾಪನದ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದನ್ನು ಖಾತರಿಪಡಿಸಿಕೊಂಡು ದೃಢೀಕರಿಸುವುದು. ಈ ಸಂಬಂಧ ಮಂಡಲಿಯಿಂದ ನೀಡಲಾಗಿರುವ ನಮೂನೆಯಲ್ಲಿ ಮಾಹಿತಿಗಳನ್ನು ಮೂರು ಪ್ರತಿಗಳಲ್ಲಿ ಭರ್ತಿಮಾಡಿ, ಒಂದು ಪ್ರತಿಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ, ಒಂದು ಪ್ರತಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಒಂದು ಪ್ರತಿಯನ್ನು ಸಮಿತಿ ಸದಸ್ಯರ ಹಂತದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು. ಸದರಿ ಭರ್ತಿ ಮಾಡಿದ ನಮೂನೆಯನ್ನು ಫಲಿತಾಂಶ ಪ್ರಕಟವಾದ ಮೂರು(3) ತಿಂಗಳವರೆಗೆ ಎಲ್ಲಾ ಹಂತದಲ್ಲೂ ಕಾಯ್ದಿರಿಸಲು ತಿಳಿಸಿದೆ.
ಕಿರುಪರೀಕ್ಷೆ ಮತ್ತು ಚಟುವಟಿಕೆಗಳಿಗೆ ಅಂಕ ನೀಡಿಕೆಯಲ್ಲಿ ಶಿಕ್ಷಕರು ಲೋಪವೆಸಗಿದ್ದಲ್ಲಿ ಅಗತ್ಯ ಸೂಚನೆಗಳನ್ನು ನೀಡಿ, ಅಂಕ ನೀಡಿಕೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು ತಿಳಿಸುವುದು. ಒಂದುವೇಳೆ ತ್ರಿ-ಸದಸ್ಯ ಸಮಿತಿಯ ಸಲಹೆಗಳನ್ನು ಅನುಪಾಲನೆ ಮಾಡದಿರುವ ಶಿಕ್ಷಕರ ಬಗ್ಗೆ ಅಗತ್ಯ ಕ್ರಮವಹಿಸಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದೆ. ತ್ರಿ-ಸದಸ್ಯ ಸಮಿತಿ ಸದಸ್ಯರು ಆಯಾ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸುವ ಕಾರ್ಯವನ್ನು ದಿನಾಂಕ:26-02-2024 ರೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದೆ ಅಂತ ತಿಳಿಸಿದೆ.