ಬೆಂಗಳೂರು: ಫೆಬ್ರವರಿ 16ರಂದು ಸಿಎಂ ಅವರು ಬಜೆಟ್ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು.
ಫೆಬ್ರವರಿ 12ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾಡಲಾಗುವ ಭಾಷಣದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರವಾಗಲಿದೆ. ರಾಜ್ಯಪಾಲರ ಭಾಷಣದ ನಂತರ 16ನೇ ವಿಧಾನಸಭೆಯ 2ನೇ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಲಾಗುವುದು.
ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪಗಳನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದರು.
ಶಾಸಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳಿಗಾಗಿ ವಿಧಾನಸಭೆಯ ಸಭಾಂಗಣದಲ್ಲಿದ್ದ ಕ್ಯಾಂಟೀನ್ ಸೌಲಭ್ಯವನ್ನು ಈ ಹಿಂದಿನಂತೆ ವಿಧಾನಸೌಧದ ಮೊದಲನೇ ಮಹಡಿಯ ಪೂರ್ವಭಾಗದಲ್ಲಿರುವ ಸೆಂಟ್ರಲ್ ಹಾಲ್ನಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಸದನದಲ್ಲಿ ಉತ್ತರಿಸಲಾಗುವ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಇತ್ಯಾದಿ ಸೂಚನೆಗಳನ್ನು ಸರಕಾರದವರು ನೀಡುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಮಾನ್ಯ ಸಂಸದರಿಗೆ ಹಾಗೂ ಪತ್ರಕರ್ತರಿಗೆ ಇ-ಮೇಲ್ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮುಖಾಂತರ ಇ-ಮೇಲ್ ಕಳುಹಿಸಲಾಗುವುದು. ಅಲ್ಲದೇ ಸಚಿವಾಲಯದ ವೆಬ್ಸೈಟಿನಲ್ಲಿಯೂ ದೊರೆಯುತ್ತದೆ ಎಂದರು.
ಶಾಸಕರಿಗೆ ವೈವಿಧ್ಯಮಯ ಭೋಜನ: ಅಧಿವೇಶನ ಆರಂಭವಾದಾಗಿನಿಂದ ಮುಕ್ತಾಯವಾಗುವವರೆಗೆ 10 ದಿನಗಳ ಕಾಲ ಬೆಳಗ್ಗೆ 8ರಿಂದ 9ರವರೆಗೆ ಸದನದ ಸದಸ್ಯರಿಗೆ ಲಘು ಉಪಹಾರ ಮತ್ತು ನಿತ್ಯ ಮಧ್ಯಾಹ್ನ ಬೆಂಗಳೂರಿನ ವಿವಿಧ ಹೋಟಲ್ಗಳ ವೈವಿಧ್ಯಮಯವಾದ ರುಚಿಕರ, ಆರೋಗ್ಯ ಪೂರ್ಣವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು. ಭದ್ರತೆಯನ್ನು ಇನ್ನಷ್ಟು ಉತ್ತಮಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಮಾಧ್ಯಮದವರು ಅತ್ಯುತ್ತಮ ವಿಷಯಗಳ ಕುರಿತು ಬೆಳಕು ಚೆಲ್ಲಿ ಸದನದ ಕಲಾಪಕ್ಕೆ ಮೆರಗು ನೀಡಬೇಕು ಎಂದು ಅವರು ಹೇಳಿದರು.