ಬೆಂಗಳೂರು : ರಾಜ್ಯ ಹಾಗೂ ದೇಶದಲ್ಲಿ ನಡೆದಿರುವ ಮತಗಳ್ಳತನ ವಿರುದ್ಧ ಎಐಸಿಸಿ ನಾಯಕರು ಹಮ್ಮಿಕೊಂಡಿರುವ ಸಹಿಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಿಂದ 1,12,40,000 ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
“ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮ ಪಕ್ಷ ರಾಜಕೀಯವಾಗಿ ವಿಭಾಗಿಸಿಕೊಂಡಿರುವ 40 ಜಿಲ್ಲೆಗಳಿಂದ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಕೆಲಸ ಮಾಡಿದ್ದಾರೆ. 8-10 ಕಡೆ ಹೊರತು ಪಡಿಸಿ, ಉಳಿದ ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಸಹಿ ಸಂಗ್ರಹಿಸಲಾಗಿದೆ. ಬೂತ್ ವಾರು ಸಹಿ ಸಂಗ್ರಹಿಸಲಾಗಿದ್ದು, ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಈ ಸಹಿ ಸಂಗ್ರಹದ ಅರ್ಜಿಗಳನ್ನು ಇದೇ ತಿಂಗಳು 10ರಂದು ದೆಹಲಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿರುವ ಜಿಲ್ಲಾಧ್ಯಕ್ಷರ ಜೊತೆ ವಿಮಾನದಲ್ಲಿ ಈ ಸಹಿ ಸಂಗ್ರಹಿಸಿರುವ ಅರ್ಜಿಗಳನ್ನು ದೆಹಲಿಗೆ ತಲುಪಿಸಲಾಗುವುದು. ನವೆಂಬರ್ ಮೂರನೇ ವಾರದಲ್ಲಿ (ನ.25) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಚಿಂತನೆ ನಡೆಸಲಾಗಿದೆ. ಈ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಎಲ್ಲಿ ಅಭಿಯಾನ ಆಗಿಲ್ಲ, ಆ ಪ್ರದೇಶಗಳಲ್ಲಿ ಇನ್ನು ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ ಮುಂದುವರೆಸಲು ಸೂಚಿಸಲಾಗುವುದು” ಎಂದು ತಿಳಿಸಿದರು.
ಮತಪತ್ರದ ಮೂಲಕ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಚಿಂತನೆ
“ಚುನಾವಣಾ ಅಕ್ರಮದ ತನಿಖೆಗೆ ಪೂರಕ ದಾಖಲೆ ನೀಡಿ ಎಂದು ಮಾಹಿತಿ ಕೇಳಿದರೆ, ಆಯೋಗವೇ ನಮ್ಮ ಬಳಿ ಸಾಕ್ಷಿ ಕೇಳುತ್ತಿದೆ. ಹೀಗಾಗಿ ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಚಿಂತನೆ ನಡೆಸಿದ್ದೇವೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಎಐಸಿಸಿ ಅವರು ತಿಳಿಸಿದ್ದು, ಇದರ ಯಶಸ್ಸು ಬಿಎಲ್ಎಗಳು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳದ್ದಾಗಿದೆ. ಈ ಹೋರಾಟ ಹಮ್ಮಿಕೊಂಡಿರುವ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಅಭಿನಂದಿಸುತ್ತೇನೆ” ಎಂದು ತಿಳಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಂದೋಲನ
“ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿ, ಮತದಾನದ ಹಕ್ಕು ಕಾಪಾಡಲು ಸಹಿ ಸಂಗ್ರಹದ ಮೂಲಕ ಬೃಹತ್ ಆಂದೋಲನ ನಡೆಸಲಾಗುತ್ತಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದ ಮತದಾನದ ಅಧ್ಯಯನ ಮಾಡಿ ಅಲ್ಲಿ ನಡೆದಿರುವ 1 ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ಮತಗಳನ್ನು ಸೇರಿಸಲಾಗಿತ್ತು. ಒಂದು ಬಾರ್ ನಲ್ಲಿ 70-80 ಮತದಾರರಿರುವುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿ ರಾಹುಲ್ ಗಾಂಧಿ ಅವರು ದೇಶದ ಗಮನ ಸೆಳೆದಿದ್ದಾರೆ” ಎಂದು ತಿಳಿಸಿದರು.
“ಈ ಅಕ್ರಮದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು ಈ ಅಕ್ರಮದ ಬಗ್ಗೆ ಬೆಳಕು ಚೆಲ್ಲಿ ಇಲ್ಲಿಂದ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದರು. ಈ ಅಕ್ರಮ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಗಾಂಧಿ ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಿವೆ. ಒಂದು ಕ್ಷೇತ್ರದಲ್ಲಿ ಇರುವ ಮತದಾರರ ಸಂಖ್ಯೆ ಅಷ್ಟೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದ ವರ್ಗದ ಕುಟುಂಬಗಳ ಸದಸ್ಯರ ಮತವನ್ನು ಬೇರೆ ಬೇರೆ ಬೂತ್ ಗಳಿಗೆ ಹಾಕಿ ವರ್ಗಾವಣೆ ಮಾಡಿರುವ ಷಡ್ಯಂತ್ರ ಬಯಲಾಗಿದೆ” ಎಂದು ವಿವರಿಸಿದರು.
ಆಳಂದ ಕ್ಷೇತ್ರದ ಅಕ್ರಮದ ತನಿಖೆಯ ವರದಿ ಶೀಘ್ರ
“ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಗೂ ಮುನ್ನವೇ ಅಕ್ರಮದ ಬಗ್ಗೆ ದೂರು ನೀಡಿ ಆಯೋಗದ ಗಮನ ಸೆಳೆಯುತ್ತಾರೆ. ನಂತರ ಈ ಅಕ್ರಮದ ಬಗ್ಗೆ ತನಿಖೆ ಆರಂಭವಾಗುತ್ತದೆ. ಚುನಾವಣಾ ಆಯೋಗವು ಅಧಿಕೃತ ದೂರು ದಾಖಲಿಸಿಕೊಳ್ಳುತ್ತದೆ. ಆಳಂದದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮತದಾರಪಟ್ಟಿಯಿಂದ ಹೆಸರು ಕೈ ಬಿಡುವಂತೆ ನಕಲಿ ಅರ್ಜಿ ಸಲ್ಲಿಸಲಾಗಿತ್ತು. ಕೇವಲ 17 ನಿಮಿಷಗಳಲ್ಲಿ 14 ಮತಗಳನ್ನು ಬೆಳಗಿನ ಜಾವದಲ್ಲಿ ತೆಗೆದುಹಾಕಲಾಗಿರುತ್ತದೆ. ಈ ರೀತಿ 6 ಸಾವಿರ ಮತ ತೆಗೆಯಲು ಪ್ರಯತ್ನಿಸುತ್ತಾರೆ. ಈ ವಿಚಾರವಾಗಿ ಎಸ್ ಐಟಿ ತನಿಖೆ ನಡೆಯುತ್ತಿದ್ದು, ಈ ತನಿಖೆ ಮೂಲಕ ಹೊರ ರಾಜ್ಯದವರು ಹಾಗೂ ಅವರ ದೂರವಾಣಿ ಸಂಖ್ಯೆ ಮೂಲಕ ಮತಗಳನ್ನು ತೆಗೆಸಲು ಷಡ್ಯಂತ್ರ ಮಾಡಲಾಗಿತ್ತು” ಎಂದರು.
“ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗ ಕೆಲಸ ಮಾಡಬೇಕಾಗುತ್ತದೆ. 256 ಬೂತ್ ಗಳಲ್ಲಿ 7250 ಮತಗಳನ್ನು ಫಾರಂ 7 ದುರುಪಯೋಗದ ಮೂಲಕ ಡಿಲೀಟ್ ಮಾಡಿಸಿದ್ದರು. ಉತ್ತರ ಪ್ರದೇಶ, ಬಿಹಾರ, ದೆಹಲಿ, ಜಾರ್ಖಂಡ್ ರಾಜ್ಯಗಳ ಜನರ ಮೊಬೈಲ್ ನಿಂದ ಈ ಅರ್ಜಿ ಸಲ್ಲಿಕೆಯಾಗುತ್ತವೆ. ಈ ಮತದಾರ ಪಟ್ಟಿಯಿಂದ ಹೆಸರು ರದ್ದಾದ 151 ಮತದಾರರು ಫೆ.23ರಂದು ದೂರು ನೀಡುತ್ತಾರೆ. ಅಂದೇ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುತ್ತದೆ. ಈ ಪ್ರಕರಣದ ತನಿಖೆ ವೇಳೆ ತನಿಖಾಧಿಕಾರಿಗಳು ತಮಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ 12 ಬಾರಿ ಪತ್ರ ಬರೆದಿದ್ದರೂ ಆಯೋಗವು ಯಾವುದೇ ಮಾಹಿತಿ ನೀಡಿಲ್ಲ. ತನಿಖಾಧಿಕಾರಿಗಳು ಹೊರ ರಾಜ್ಯದ 9 ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರು ಮತದಾರ ಪಟ್ಟಿ ಸೇರಿದಂತೆ ಅನೇಕ ದಾಖಲೆಗಳನ್ನು ಸುಟ್ಟು ಹಾಕಿರುವ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣದಲ್ಲಿ ಒಂದು ಮತ ಡಿಲೀಟ್ ಆದರೆ ಅದಕ್ಕೆ 80 ರೂಪಾಯಿ ಹಣ ನೀಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಚಿಲುಮೆ ಸಂಸ್ಥೆಯನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನನ್ನು ನಾವು ಬೆಳಕಿಗೆ ತಂದಿದ್ದೆವು. ಈ ಪ್ರಕರಣದ ತನಿಖಾ ವರದಿ ಶೀಘ್ರದಲ್ಲೇ ಬರಲಿದೆ” ಎಂದರು.
“ಈಗ ಹರಿಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರು ಬೆಳಕು ಚೆಲ್ಲಿದ್ದಾರೆ. ಆ ರಾಜ್ಯದ ಚುನಾವಣೆಯಲ್ಲಿ ಒಟ್ಟು 25 ಲಕ್ಷದಷ್ಟು ಮತಗಳು ಅಕ್ರಮವಾಗಿವೆ ಎಂದು ತಿಳಿಸಿದ್ದಾರೆ. ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ರಾಹುಲ್ ಗಾಂಧಿ ಅವರ ಹೋರಾಟದ ಚಿಂತನೆ. ಕರ್ನಾಟಕ ರಾಜ್ಯದಿಂದಲೇ ಈ ಹೋರಾಟ ಆರಂಭವಾಗಿದ್ದು, ದೇಶದಾದ್ಯಂತ ಜನರಿಂದ ಸಹಿ ಸಂಗ್ರಹ ಮಾಡಿ ಈ ವಿಚಾರದಲ್ಲಿ ರಾಷ್ಟ್ರಪತಿಗಳು ಹಾಗೂ ಚುನಾವಣಾ ಆಯೋಗಕ್ಕೆ ಜನರ ಅಭಿಪ್ರಾಯ ತಿಳಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟ ಮಾತ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಾನದ ಹಕ್ಕು ಉಳಿಸುವ ಹೋರಾಟ. ಈ ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಪಕ್ಷಬೇಧ ಮರೆತು ಭಾಗವಹಿಸಿದ್ದಾರೆ” ಎಂದು ತಿಳಿಸಿದರು.
ಈ ಆರೋಪಗಳ ಬಗ್ಗೆ ಕಾಂಗ್ರೆಸ್ ಎಲ್ಲೂ ಅಫಿಡವಿಟ್ ಸಲ್ಲಿಸಿಲ್ಲ ಚುನಾವಣಾ ಆಯೋಗ, ನ್ಯಾಯಾಲಯದ ಮೆಟ್ಟಿಲೂ ಏರಿಲ್ಲ ಯಾಕೆ ಎಂದು ಕೇಳಿದಾಗ, “ನಾವು ಚುನಾವಣಾ ಅಯೋಗದ ಬಳಿ ಪೂರಕ ದಾಖಲೆಗಳನ್ನು ಕೇಳುತ್ತಿದ್ದೇವೆ. ಚುನಾವಣಾ ಆಯೋಗದ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿರಬೇಕು. ಅವರು ಅಗತ್ಯ ಮಾಹಿತಿ ನೀಡಬೇಕು. ಆದರೆ ಅವರು ಈ ಮಾಹಿತಿ ನೀಡುತ್ತಿಲ್ಲ. ನಾವು ತನಿಖೆ ಮಾಡಿ ಸಂಗ್ರಹಿಸಿರುವ ಮಾಹಿತಿಗಳನ್ನು ಬಹಿರಂಗಪಡಿಸಿದ್ದೇವೆ. ನಾನೇ ಹೋಗಿ ಮಾಹಿತಿ ನೀಡುವಂತೆ ಅರ್ಜಿ ಕೊಟ್ಟಿದ್ದರೂ ಅವರೇ ನನ್ನ ಬಳಿ ದಾಖಲೆ ಕೇಳುತ್ತಿದ್ದಾರೆ. ಮಾಹಿತಿ ಕೇಳುವ ಹಕ್ಕು ನಮಗಿದೆ. ಆ ಮಾಹಿತಿಗಳನ್ನು ಕೊಡಬೇಕಾಗಿರುವುದು ಅವರ ಕರ್ತವ್ಯ. ಅವರು ಮೊದಲು ದಾಖಲೆ ನೀಡಲಿ. ಆಮೇಲೆ ನಾವು ಅಫಿಡವಿಟ್ ಸಲ್ಲಿಸುತ್ತೇವೆ. ಮಹದೇವಪುರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಆರೋಪ ಮಾಡಿದ ಬಳಿಕ ಕೆಲ ಮಾಧ್ಯಮದವರು ಅದೇ ವಿಳಾಸಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಒಂದು ಕೊಠಡಿಯಲ್ಲಿ 84 ಮತಗಳಿರುವುದು ಅವರ ವರದಿಯಲ್ಲೂ ಸಾಬೀತಾಯಿತು. ಮತ್ತೊಂದು ಬಾರ್ ನಲ್ಲಿ 56 ಮತಗಳಿದ್ದವು. ಈ ವಿಚಾರವಾಗಿ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ. ಅವರು ಸರ್ಕಾರಕ್ಕೂ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿಲ್ಲ. ಆಳಂದದಲ್ಲಿ ದೂರಿನನ್ವಯ ನಮ್ಮ ಸರ್ಕಾರ ಎಸ್ಐಟಿ ರಚಿಸಿದ್ದು, ಆ ಎಸ್ ಐಟಿ ತನಿಖೆಗೂ ಆಯೋಗ ಅಗತ್ಯ ಮಾಹಿತಿ ನೀಡದೇ ಸಹಕಾರ ನೀಡುತ್ತಿಲ್ಲ. ಚುನಾವಣಾ ಆಯೋಗ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮತದಾನದ ಹಕ್ಕು ಕಾಪಾಡುವುದು ನಮ್ಮ ಉದ್ದೇಶ. ನಾವು ಹೋರಾಟ ಆರಂಭಿಸಿದ ನಂತರ ಚುನಾವಣಾ ಆಯೋಗ ಎಸ್ಐಆರ್ ಮಾಡುವುದಾಗಿ ಹೇಳುತ್ತಿದೆ. ನಾವು ಈ ವಿಚಾರವಾಗಿ ಯಾಕೆ ನ್ಯಾಯಾಲಯದ ಮೆಟ್ಟಿಲೇರಬೇಕು? ಆಯೋಗ ಸಂವಿಧಾನಿಕ ಸಂಸ್ಥೆ” ಎಂದು ತಿಳಿಸಿದರು.
ನಿಮ್ಮ ಆರೋಪಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕೇಳಿದಾಗ, “ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. 300 ಸಂಸದರು ಕೇಂದ್ರ ಚುನಾವಣಾ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇವತ್ತಿನವರೆಗೂ ಅದರ ಬಗ್ಗೆ ಆಯೋಗ ಪ್ರತಿಕ್ರಿಯೆ ನೀಡಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿಲ್ಲ. ಹೊಸದಾಗಿ ಎಸ್ಐಆರ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿದರೆ ಯಾರ ಹೆಸರು ಆಚೆ ಬರಲಿದೆ ಎಂದು ಆಯೋಗದವರಿಗೂ ಗೊತ್ತಿದೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ನಾವು ಸಂವಿಧಾನ ಉಳಿಸಿ, ಮತದಾನದ ಹಕ್ಕು ರಕ್ಷಿಸಲು ಈ ಹೋರಾಟ ಮಾಡುತ್ತಿದ್ದೇವೆ. ಇದು ನಮ್ಮ ಕರ್ತವ್ಯ. ಮತಗಳ್ಳತನ ಹೇಗಾಗಿದೆ ಎಂದು ಜನರಿಗೆ ಅರಿವು ಮೂಡಿಸುವುದು ನಮ್ಮ ಕೆಲಸ. ನಾನು ನಮ್ಮ ರಾಜ್ಯದಲ್ಲಿ 15 ಲಕ್ಷ ಮತದಾರರನ್ನು ಹೇಗೆ ಕಾಪಾಡಿಕೊಂಡಿದ್ದೇವೆ ಎಂದು ನನಗೆ ಮಾತ್ರ ಗೊತ್ತಿದೆ. ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ, ಬಹಿರಂಗಪಡಿಸಿದರೆ ದೊಡ್ಡ ಸುದ್ದಿಯಾಗುತ್ತದೆ. ಇದೆಲ್ಲವನ್ನು ನಿಯಂತ್ರಿಸಲು ಎಲ್ಲಾ ಬೂತ್ ಗಳಲ್ಲಿ ಬಿಎಲ್ಎಗಳನ್ನು ನೇಮಿಸುತ್ತಿದ್ದೇವೆ” ಎಂದು ತಿಳಿಸಿದರು.
ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ನಮ್ಮ ನಾಯಕರು ಅತ್ಯುತ್ತಮವಾಗಿ ಶ್ರಮಿಸಿದ್ದಾರೆ. ನಮಗೆ ಬಿಹಾರ ಜನತೆ ಮೇಲೆ ನಂಬಿಕೆ ಇದೆ. ಬದಲಾವಣೆ ಬಯಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಹಾರದ ಜನ ನಮಗೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದರು.
ರಾಜ್ಯ ಮತದಾರರ ಪಟ್ಟಿ ಬಳಕೆ
ಈ ಅಕ್ರಮ ಮುಚ್ಚಿಹಾಕಲು ಆಯೋಗವು ಪರಿಷ್ಕರಣೆಗೆ ಮುಂದಾಗಿದೆಯೇ ಎಂದು ಕೇಳಿದಾಗ, “ನಾವು ಈ ಆರೋಪ ಬಹಿರಂಗಗೊಳಿಸಿದ ಬಳಿಕ ಆಯೋಗ ಪರಿಷ್ಕರಣೆಗೆ ಮುಂದಾಗಿದ್ದು ಯಾಕೆ? ನಾವು ಈ ವಿಚಾರದಲ್ಲಿ ಹೋರಾಟ ಆರಂಭಿಸಿದ ಕಾರಣಕ್ಕೆ ಮಾಡುತ್ತಿದ್ದಾರ. ಮುಂದೆ ತಮ್ಮ ತಪ್ಪು ಎಲ್ಲಿ ಸಾಬೀತಾಗುತ್ತದೆಯೋ ಎಂದು ಈ ರೀತಿ ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೇಂದ್ರ ಆಯೋಗದ ಮತಪಟ್ಟಿ ಬದಲು ನಮ್ಮ ರಾಜ್ಯ ಚುನಾವಣಾ ಆಯೋಗದ ಪ್ರತ್ಯೇಕ ಮತದಾರರ ಪಟ್ಟಿಯನ್ನು ಬಳಸಲು ತೀರ್ಮಾನಿಸಿದೆ. ಆಗ ಎಷ್ಟು ಮತಗಳ ಅಕ್ರಮ ನಡೆದಿದೆ ಎಂದು ಸಾಬೀತಾಗುತ್ತದೆ” ಎಂದರು.
ಅಕ್ರಮದಲ್ಲಿ ಚುನಾವಣಾ ಆಯೋಗವು ಭಾಗಿ:
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರದಲ್ಲಿ ಓರ್ವ ಮಹಿಳೆ ಬಳಿ 200 ಮತಗಳಿವೆ ಎಂದು ಆರೋಪ ಮಾಡಿದ್ದೀರಿ ಎಂದು ಕೇಳಿದಾಗ, “ಮತಪೆಟ್ಟಿಗೆಯಲ್ಲಿ 49 ಶೂನ್ಯಕ್ಕೆ ಸಮ, 51 ನೂರಕ್ಕೆ ಸಮ. ಕಾಂಗ್ರೆಸ್ ಅಭ್ಯರ್ಥಿಯಾದರೇನು, ಬಿಜೆಪಿ ಅಭ್ಯರ್ಥಿಯಾದರೇನು. ಎಲ್ಲಿ ಅಕ್ರಮ ನಡೆಡಿದೆಯೋ ಅದರ ಬಗ್ಗೆ ಮಾತನಾಡಿದ್ದೇವೆ. ಕೆಲವು ಕಡೆ ಅಕ್ರಮವನ್ನು ಮೀರಿ ನಾವು ಗೆದ್ದಿದ್ದೇವೆ. ಆಳಂದದಲ್ಲಿ ನಮ್ಮ ಅಭ್ಯರ್ಥಿ ಈ ಷಡ್ಯಂತ್ರ ಮೀರಿ ಗೆಲುವು ಸಾಧಿಸಿದ್ದಾರೆ. ಹರಿಯಾಣದಲ್ಲಿ ಆಗಿರುವ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ. ಆದರೂ ಆಯೋಗ ಯಾಕೆ ಇದನ್ನು ತಡೆಗಟ್ಟುತ್ತಿಲ್ಲ. ಈಗಿರುವ ತಂತ್ರಜ್ಞಾನದಲ್ಲಿ ಈ ಅಕ್ರಮ ತಡೆಯಲು ಯಾಕೆ ಸಾಧ್ಯವಾಗಿಲ್ಲ? ಚುನಾವಣಾ ಆಯೋಗವು ಈ ಅಕ್ರಮದಲ್ಲಿ ಭಾಗಿಯಾಗಿದೆ” ಎಂದು ತಿಳಿಸಿದರು.
ಸಂವಿಧಾನದಲ್ಲಿ ಗೌಪ್ಯ ಮತದಾನ ಎಂದು ಇರುವಾಗ ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಹೇಗೆ ಕೇಳುತ್ತಾರೆ ಎಂದು ಕೇಳಿದಾಗ, “ಮತದಾರ ಯಾರಿಗೆ ಮತಹಾಕಿದ ಎಂದು ತೋರಿಸದಿದ್ದರೂ, ಮತಗಟ್ಟೆಯೊಳಗೆ ಎಷ್ಟು ಮತದಾರರು ಹೋದರು, ಯಾವ ಸಮಯದಲ್ಲಿ ಹೋದರು ಎಂಬ ಮಾಹಿತಿ ನೀಡಲು ಸಮಸ್ಯೆ ಏನು? ಮಹಾರಾಷ್ಟ್ರದಲ್ಲಿ ಕೊನೆ ಒಂದು ಗಂಟೆ ಅವಧಿಯಲ್ಲಿ ಲಕ್ಷಾಂತರ ಮತ ಚಲಾವಣೆಯಾಗಿದೆ. ಈ ಮತಗಳನ್ನು ಯಾರು ಹಾಕಿದರು ಎಂಬುದು ದಾಖಲೆ ಬೇಕಲ್ಲವೇ? ಇದು ದೇಶದ ಮುಂದಿರುವ ಸವಾಲು” ಎಂದರು.
ಮಹದೇವಪುರ ಕ್ಷೇತ್ರದಲ್ಲಿನ ಅಕ್ರಮದ ಬಗ್ಗೆ ತನಿಖೆ ಮಾಡಿಸುತ್ತೀರಾ ಎಂದು ಕೇಳಿದಾಗ, “ಈ ತನಿಖೆಯನ್ನು ಸರ್ಕಾರವೇ ಮಾಡಬೇಕಿಲ್ಲ. ಚುನಾವಣೆ ಪ್ರಕ್ರಿಯೆ ವೇಳೆ ಸಂಪೂರ್ಣ ನಿಯಂತ್ರಣ ಚುನಾವಣಾ ಆಯೋಗದ ಕೈಯಲ್ಲಿರುತ್ತದೆ. ಹೀಗಾಗಿ ರಾಜಕೀಯ ಪಕ್ಷವಾಗಿ ನಾವೇ ತನಿಖೆ ಮಾಡಿ ಅಕ್ರಮಗಳನ್ನು ದಾಖಲೆ ಸಮೇತ ಬಹಿರಂಗಪಡಿಸಿದ್ದೇವೆ. ಮಾಧ್ಯಮಗಳು ಕೂಡ ತನಿಖೆ ಮಾಡಿ ಈ ಆರೋಪ ನಿಜ ಎಂದು ವರದಿ ಮಾಡಿವೆ” ಎಂದು ತಿಳಿಸಿದರು.
ಆಳಂದದ ಬಗ್ಗೆ ತನಿಖೆ ಮಾಡುತ್ತಿರುವ ಬೇರೆ ಕ್ಷೇತ್ರಗಳ ಬಗ್ಗೆ ಯಾಕೆ ಮಾಡುತ್ತಿಲ್ಲ ಎಂದು ಕೇಳಿದಾಗ, “ನಾವು ಎಲ್ಲಾ ಕ್ಷೇತ್ರಗಳ ತನಿಖೆ ಮಾಡುತ್ತಿದ್ದು, ಎಷ್ಟು ಮಾಹಿತಿ ನೀಡಬೇಕೋ ನೀಡುತ್ತಿದ್ದೇವೆ. 224 ಕ್ಷೇತ್ರಗಳ ಮಾಹಿತಿ ನೀಡಬೇಕಿಲ್ಲ. ನಿಮ್ಮ ಬಳಿ ಏನಾದರೂ ಮಾಹಿತಿ ಇದ್ದರೆ ನೀವು ನೀಡಿ” ಎಂದರು.
ಒಂದು ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕ
ಕಾರ್ಯಕರ್ತರಿಗೆ ನಿಗಮ ಮಂಡಳಿ ಸದಸ್ಯತ್ವ ನೀಡಿಲ್ಲ ಯಾಕೆ ಎಂದು ಕೇಳಿದಾಗ, “ಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಜನರಿಗೆ ಗ್ಯಾರಂಟಿ ಸಮಿತಿ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಕ್ಷೇತ್ರಗಳಲ್ಲಿ 60 ಜನರನ್ನು ನಾಮನಿರ್ದೇಶನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ 600 ಸ್ಥಾನಗಳಿವೆ. ಇವುಗಳನ್ನು ಇನ್ನೊಂದು ವಾರದಲ್ಲಿ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.








