ಹುಬ್ಬಳ್ಳಿ:ಅಲ್ರೀ ಈ ಮೋದಿ ಹತ್ತತ್ತು ವರ್ಷ ಸುಳ್ ಹೇಳ್ಕಂಡು ತಿರುಗಿದ್ರಲ್ಲಾ ನಿಮ್ ಓಟಿಗೆ ಘನತೆ ಬಂತಾ. ಮೋದಿ ಸುಳ್ಳುಗಳಿಗೆ ಹತ್ತು ವರ್ಷ ತಲೆಕೊಟ್ಟು ಮೋಸ ಹೋದ್ರಿ. ಈ ಬಾರಿಯೂ ಮೋಸ ಹೋಗ್ಬೇಡಿ. ಪ್ರಹ್ಲಾದ್ ಜೋಶಿ ಸೋಲಿಸಿ, ವಿನೋದ್ ಅಸೂಟಿ ಗೆಲ್ಲಿಸಿಕೊಂಡು ಬನ್ನಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.

ಹುಬ್ಬಳ್ಳಿಯಲ್ಲಿ ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂತ ಮೋದಿ ಹೇಳಿದ್ರು. ಆದಾರೆ ಕೃಷಿ ಖರ್ಚು ಮೂರು ಪಟ್ಟಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಎಲ್ಲದರ ಬೆಲೆ ಗಗನಕ್ಕೆ ಏರಿಸಿ “ಅಚ್ಚೇ ದಿನ್ ಆಯೆಗಾ” ಅಂತ ಡೈಲಾಗ್ ಹೊಡೆಯುತ್ತಾ ಕಾಲ ಕಳೆದರು ಎಂದು ಟೀಕಿಸಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿಸುವುದಾಗಿ ಭಾಷಣ ಮಾಡಿದರು. ಆದರೆ ಈಗ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದ್ದಾರೆ.

ಮೋದಿಯವರ ಕೆಟ್ಟ ಆರ್ಥಿಕ ನೀತಿಯಿಂದ ಸೃಷ್ಟಿಯಾದ ಹಣದುಬ್ಬರ, ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದಲೇ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿದೆವು. ಸರ್ಕಾರ ಬಂದ ದಿನದಿಂದಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾದೆವು. ಕೇವಲ 8 ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿಗಳನ್ನೂ ಜಾರಿ ಮಾಡಿ ಪ್ರತೀ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ನೀವು ನಮಗೆ ಕೊಟ್ಟ ಮತಕ್ಕೆ ಗೌರವ ತಂದಿದ್ದೇವೆ ಎಂದರು.

ಭಾಷಣದ ಇತರೆ ಹೈಲೈಟ್ಸ್

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ ಅಂತ ಮೋದಿ ಸುಳ್ಳು ಹೇಳಿದ್ದರು. ನಾವು ಐದಕ್ಕೂ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ

ಈಗ ಬಿಜೆಪಿ ಹೊಸ ಸುಳ್ಳು ಹೊಸೆದಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ಬಳಿಕ ಗ್ಯಾರಂಟಿಗಳು ಬಂದ್ ಆಗ್ತವೆ ಎನ್ನುತ್ತಿದ್ದಾರೆ. ಐದೂ ವರ್ಷ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ

ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ರಾಜ್ಯದಲ್ಲಿ ಮೀಸಲಾತಿ ನೀತಿ ಜಾರಿಯಲ್ಲಿದೆ. ಆದರೆ ಈ ವಿಚಾರದಲ್ಲೂ ಮೋದಿ ಮತ್ತು ಬಿಜೆಪಿ ಸುಳ್ಳು ಹೇಳುತ್ತಿದೆ

ಸ್ವತಃ ಬಸವರಾಜ ಬೊಮ್ಮಾಯಿ ಅವರ BJP ಸರ್ಕಾರವೇ ಸುಪ್ರೀಂಕೋರ್ಟ್ ಎದುರು ಮುಸ್ಲೀಮರ ಮೀಸಲಾತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ. ಇದು ನಿಮಗೆ ಗೊತ್ತಿಲ್ಲವೇ ಮೋದಿಯವರೇ?

ಕಳೆದ ಬಾರಿ ಪ್ರಹ್ಲಾದ್ ಜೋಶಿ ಸೇರಿ 25 ಮಂದಿ ಸಂಸದರು ಬಿಜೆಪಿಯಿಂದ ಗೆದ್ರಲ್ಲಾ ರಾಜ್ಯಕ್ಕೆ ಅನ್ಯಾಯ ಆದಾಗ ಬಾಯೇ ಬಿಡಲಿಲ್ಲ. ಇಂಥವರಿಂದ ರಾಜ್ಯಕ್ಕೆ ಘನತೆ ಬರತ್ತಾ

*ರಾಜ್ಯಕ್ಕೆ ಅನ್ಯಾಯ ಆದಾರ, ರಾಜ್ಯದ ಜನರ ಬೆವರಿಗೆ, ತೆರಿಗೆ ಹಣಕ್ಕೆ ಮೋಸ ಆದಾಗಲೂ ಬಾಯಿ ಬಿಡದ ಪ್ರಹ್ಲಾದ್ ಜೋಶಿ ಕೇವಲ ದೇವರು, ಧರ್ಮದ ಹೆಸರಲ್ಲಿ ನಿಮ್ಮನ್ನು ಬಕ್ರಾ ಮಾಡಲು ಅವಕಾಶ ಕೊಡಬೇಡಿ. ಪ್ರಜ್ಞಾವಂತರಾಗಿ ಮತದಾನ ಮಾಡಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

Share.
Exit mobile version