ಬೆಂಗಳೂರು: ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.
ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಬಗ್ಗೆ ಕಿಡಿಕಾರಿದರಲ್ಲದೆ ಅಂತಹ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಕೊಡುವುದು ಆಗ್ತಿದೆ. ಚುನಾವಣೆ ಬಂದಾಗಿನಿಂದ ಅದು ಜಾಸ್ತಿಯಾಗಿದೆ. ಬೇರೆ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬರುವವರನ್ನು ಕೆಲ ಕಡೆ ಪೋಲಿಸರ ಮಧ್ಯಸ್ಥಿಕೆಯಲ್ಲಿ ಹೆದರಿಸಿ ಅವರನ್ನು ಪುನಾ ಅದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಎಂದು ಅವರು ಹೇಳಿದರು.
ನಾನು ಪೋಲಿಸರಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
ರಾಜ್ಯದ ಜನತೆಯ ಹಣದಿಂದ ನೀವು ಕೆಲಸ ಮಾಡ್ತಿದ್ದೀರಿ ಅನ್ನೋದನ್ನ ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನೂ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಇಂಥ ದ್ವೇಷದ ರಾಜಕೀಯಕ್ಕೆ ನಾನು ಪ್ರೋತ್ಸಾಹ ಕೊಟ್ಟಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ನಾರಾಯಣಗೌಡ ವಿರುದ್ಧ ಕಿಡಿ
ತಮ್ಮ ಬಗ್ಗೆ ಕೀಳಾಗಿ ಹೇಳಿಕೆ ನೀಡಿರುವ ಸಚಿವ ನಾರಾಯಣಗೌಡ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬರನ್ನು ತುಳಿಯಲು ಇನ್ನೊಬ್ಬರನ್ನು ಬೆಳೆಸುತ್ತಾರೆ ಎಂಬ ನಾರಾಯಣಗೌಡರ ಹೇಳಿಕೆಗೆ ಕಿಡಿಕಿಡಿಯಾದ ಅವರು, ನಾರಾಯಣಗೌಡ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾರಾಯಣಗೌಡರನ್ನು ಬೆಳೆಸೋಕೆ ನನ್ನ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕಾ? ಇವರು ಮಹಾನ್ ಕೆಲಸ ಮಾಡಿದ್ದಾರೆ ಅಂತ ಹೇಳಿ ನಾನು ಅಭ್ಯರ್ಥಿ ಹಾಕದೇ ಇರಲಾ? ಕೃಷ್ಣ ವಿರುದ್ದ ಅಭ್ಯರ್ಥಿ ಆಗಬೇಕು ಅಂತ ಬಂದಾಗ ಅವತ್ತು ಈ ಪರಿಜ್ಞಾನ ಇರಲಿಲ್ಲವಾ ಇವರಿಗೆ? ಕೃಷ್ಣ ವಿರುದ್ದ ಅಭ್ಯರ್ಥಿ ಆಗೋಕೆ ಯಾಕೆ ಬಂದರು ಇವರು. ಎರಡನೇ ಬಾರಿ ನಿನಗೆ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ಆದರೂ ಟಿಕೆಟ್ ಕೊಟ್ಟೆವು. ನಾನು ಟಿಕೆಟ್ ಕೊಡಿಸಿದ್ದು ನಾನು. ಕುತ್ತಿಗೆ ಕೊಯ್ದು ಹೋದವನು ಈ ವ್ಯಕ್ತಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನಿಂದ ನಾವು ಪಾಠ ಕಲಿಯಬೇಕಿಲ್ಲ. ನಾವು ಯಾವ ರೀತಿ ನಡೆದುಕೊಳ್ಳಬೇಕು ಅಂತ ನಮಗೆ ಗೊತ್ತಿದೆ. ನಿನ್ನ ಕಾಲ ಮುಗಿದಿದೆ ಎಂದು ಅವರು ಕಿಡಿಕಾರಿದರು.
Viral Video : ಲಂಚ ಕೇಳಿದ್ದಕ್ಕೆ ಕೆರಳಿದ ವ್ಯಕ್ತಿ, ರಸ್ತೆಗೆ ಕಂತೆ ಕಂತೆ ‘ನೋಟು’ ಎಸೆದು ಪ್ರತಿಭಟನೆ, ವಿಡಿಯೋ ವೈರಲ್