ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಹೊಸ ವರ್ಷದ ಮೊದಲು ಹಬ್ಬ ಸಂಕ್ರಾತಿ. ಇನ್ನೇನು ಈ ಹಬ್ಬ ಹತ್ರವಿದೆ. ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಆಚರಿಸುತ್ತಾರೆ. ಹಳ್ಳಿ ಕಡೆಯಲ್ಲಿ ಈ ಹಬ್ಬವನ್ನು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಬ್ಬವನ್ನು ಸಂಕ್ರಾಂತಿ, ಲೋಹ್ರಿ, ಉತ್ತರಾಯಣ, ಪೊಂಗಲ್‌, ಮಾಗ್‌ ಬಿಹು, ಸಕ್ರತ್‌ ಎಂಬ ನಾನಾ ಹೆಸರಿನಿಂದ ಕರೆಯಲಾಗುತ್ತದೆ.

ಮಕರ ಸಂಕ್ರಾಂತಿ ಮಹತ್ವ : ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವನ್ನು ಮಕರ ಸಂಕ್ರಾತಿ ಹಬ್ಬವಾಗಿ ಪ್ರತಿ ವರ್ಷ ಆಚರಿಸುತ್ತೇವೆ. ಇದರ ಪ್ರಕಾರ 6 ತಿಂಗಳ ಕಾಲ ಹೆಚ್ಚು ಬೆಳಕು ಹಾಗೂ ಉಳಿದ 6 ತಿಂಗಳು ಅಂದರೆ ಜೂನ್‌ 15 ರಿಂದ ದಕ್ಷಿಣಾಯಣ ಆರಂಭವಾಗಿ ಆಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮಹಾಭಾರತದ ಒಂದು ಕಥೆ ಪ್ರಚಲಿತದಲ್ಲಿದೆ. ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ ಮಾಡದೆ, ಉತ್ತರಾಯಣದ ಅಷ್ಟಮಿ ದಿನಕ್ಕಾಗಿ ಕಾಯುತ್ತಾನೆ. ಆದ್ದರಿಂದ ಉತ್ತರಾಯಣ ಬಹಳ ಪುಣ್ಯಕಾಲ ಎಂಬ ನಂಬಿಕೆ ಇದೆ.

ಹಾಗೇ ಬ್ರಹ್ಮನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ್ದು, ಶಿವ-ಪಾರ್ವತಿ ಮದುವೆಯಾಗಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಎಲ್ಲವೂ ಉತ್ತರಾಯಣದಲ್ಲಿ. ಈ ಸಮಯ ದೇವಾನುದೇವತೆಗಳಿಗೆ ಬಹಳ ಪ್ರಿಯವಾದುದು. ಹಬ್ಬದ ಆಚರಣೆ ಹೇಗೆ?

ಗಾಳಿಪಟ ಹಾರಿಸುವುದು, ಸಿಹಿ ಪೊಂಗಲ್‌, ಖಾರ ಪೊಂಗಲ್‌ ತಯಾರಿಸುವುದು, ಎಳ್ಳು ಬೆಲ್ಲ ಹಂಚುವುದು, ಹಸುಗಳಿಗೆ ಕಿಚ್ಚು ಹಾಯಿಸುವುದು ಸಾಮಾನ್ಯವಾಗಿ ಕರ್ನಾಟಕದಲ್ಲಿ ಆಚರಿಸುವ ಆಚರಣೆ. ಇದನ್ನು ಸ್ನಾನ ಹಾಗೂ ದಾನದ ಹಬ್ಬ ಎಂದೂ ಕರೆಯುವುದರಿಂದ ಈ ಹಬ್ಬದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಬಡಬಗ್ಗರಿಗೆ ದಾನ ಮಾಡಿದರೆ ಸೂರ್ಯ ದೇವನು ಪ್ರಸನ್ನನಾಗಿ ನಮ್ಮನ್ನು ಹರಸುತ್ತಾನೆ ಎಂಬ ನಂಬಿಕೆ ಇದೆ.

ಜ್ಯೋತಿಷಿಗಳು ಮತ್ತು ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಈ ದಿನ, ಸೂರ್ಯನು ಧನು ರಾಶಿಯಿಂದ ಮುಂಜಾನೆ 02.54 ಕ್ಕೆ ಹೊರಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಶುಭ ಸಮಯವು ಈ ಕೆಳಗಿನಂತಿರುತ್ತದೆ.

ಮಕರ ಸಂಕ್ರಾಂತಿ ಪುಣ್ಯಕಾಲ – ಬೆಳಿಗ್ಗೆ 07:15 ರಿಂದ ಸಂಜೆ 06:21
ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ – ಬೆಳಿಗ್ಗೆ 07:15 ರಿಂದ 09:06

Share.
Exit mobile version