ಬೆಂಗಳೂರು : ಸಿಲಿಕಾನ್ ಸಿಟಿಯ ದಕ್ಷಿಣ ಭಾಗದ ವಿವಿಧೆಡೆ ನವೆಂಬರ್ 21ರಂದು ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆ ಹೊರಡಿಸಿದೆ.

ದಕ್ಷಿಣ ಬೆಂಗಳೂರಿನ ಸುತ್ತಮುತ್ತ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾರ್ಗಗಳನ್ನು ಬದಲಾಯಿಸಲಾಗುತ್ತಿದೆ. ಹೀಗಾಗಿ ನವೆಂಬರ್ 21ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನೀರು ಸರಬರಾಜು ಸ್ಥಗಿಗೊಳ್ಳಲಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಮಾಹಿತಿ ನೀಡಿದೆ.

ಕೆಆರ್ಪುರಂನಿಂದ ಸಿಲ್ಕ್ಬೋರ್ಡ್ವರೆಗೆ ಹೊರವರ್ತುಲ ರಸ್ತೆಯಲ್ಲಿನ ಕಾಮಗಾರಿ ನಡೆಯಲಿದೆ. ಹೀಗಾಗಿ ಜಂಬೂ ಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆಪಿನಗರ 4,5,6 ಮತ್ತು 7ನೇ ಹಂತ, ತಿಲಕ್ ನಗರ, ವಿಜಯಾಬ್ಯಾಂಕ್ ಲೇಔಟ್, ಬಿಳೇಕಹಳ್ಳಿ, ರೋಲೆ ಕಾಲೋನಿ, ಕೋಡಿಚಿಕ್ಕನಹಳ್ಳಿ, ಎಚ್ಎಸ್ಆರ್ , ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯ, ಹೊಸ ಪಾಳ್ಯ, ಎಲೆಕ್ಟ್ರಾನಿಕ್ ಸಿಟಿ 1,2,3ನೇ ಬ್ಲಾಕ್, ಕೋರಮಂಗಲ, ಕುದುರೆಮುಖ ಕಾಲೋನಿ, ಮೇಸ್ತ್ರಿ ಪಾಳ್ಯ, ಹೊಸ ಗುರಪ್ಪನಪಾಳ್ಯ, ಕೆಇಬಿ ಲೇಔಟ್, ಸುದರ್ಶನ ಸ್ಲಂ, ಬಿಸ್ಮಿಲ್ಲಾನಗರ, ಮಾರುತಿ ಲೇಔಟ್, ನಾರಾಯಣಪ್ಪ ಗಾರ್ಡನ್, ಮೈಕೋ ಲೇಔಟ್, ಬಾಲಾಜಿನಗರ, ಎನ್ಎಸ್ ಪಾಳ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಬೆಂಗಳೂರಿನ ನೀರಿನ ದರ ಪರಿಷ್ಕರಣೆ
ಇನ್ನೊಂದೆಡೆ ವಿದ್ಯುತ್ ದರ ಪರಿಷ್ಕರಣೆ ಮಾದರಿಯಲ್ಲಿ ಬೆಂಗಳೂರಿನ ನೀರಿನ ದರ ಪರಿಷ್ಕರಣೆ ಮಾಡಲು ಅವಕಾಶ ನೀಡಬೇಕೆಂದು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಿ ಸಲು ಅವಕಾಶ ನೀಡಬೇಕೆಂದು ಬೆಂಗಳೂರು ಜಲಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ ಎಂದು ತಿಳಿದು ಬಂದಿದೆ.

ಮಂಡಳಿಯ ಆಡಳಿತ ನಿರ್ವಹಣಾ ವೆಚ್ಚ ಸರಿದೂಗಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ವರ್ಷಕ್ಕೊಮ್ಮೆಯಾದರೂ ನೀರಿನ ದರ ಪರಿಷ್ಕರಣೆಗೆ ಅವಕಾಶ ನೀಡಬೇಕೆಂದು ಜಲಮಂಡಳಿಯ ಪ್ರಸ್ತಾಪವಾಗಿದ್ದು, ಸದ್ಯ ಈಗ ಅದು ರಾಜ್ಯ ಸರ್ಕಾರದ ಮುಂದಿದೆ.

Share.
Exit mobile version