ಬೆಂಗಳೂರು : 2023-24ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಮುಕ್ತಾಯದವರೆಗೂ ಪ್ರಸ್ತುತ ಅಮಾನತ್ತುಗೊಂಡಿರುವ ಶಿಕ್ಷಕರುಗಳನ್ನು ಸ್ಥಳ ನಿಯುಕ್ತಿಗೊಳಿಸದೇ ಇರುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.

ವಿಷಯದನ್ವಯ 2023-24ನೇ ಸಾಲಿನ ಶಿಕ್ಷಕರ ವರ್ಗಾವಣೆ ಕುರಿತಂತೆ ಉಲ್ಲೇಖಿತ ಪತ್ರದಲ್ಲಿ ವಿಸ್ತ್ರತವಾದ ಮಾರ್ಗಸೂಚಿ ಸಹಿತ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 3 (1) (i) (ii)(iii), ಗಳ ಉಲ್ಲಂಘನೆಯ ಆರೋಪದಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ-10 (1)(ಡಿ) ರನ್ವಯ ಕೆಲವು ಶಿಕ್ಷಕರುಗಳನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಆಯಾ ವ್ಯಾಪ್ತಿಯ ಸಕ್ರಮ ಶಿಸ್ತು ಪ್ರಾಧಿಕಾರಿಗಳು ಅಮಾನತ್ತುಗೊಳಿಸಿರುವ ಪ್ರಕರಣಗಳು ಕಂಡುಬಂದಿರುತ್ತದೆ. ಅಲ್ಲದೇ ಕೆಲವು ಉಪನಿರ್ದೇಶಕರುಗಳು ನಿಯಮಬಾಹಿರವಾಗಿ ವ್ಯತಿರಿಕ್ತ ಬೋಧನಾ ವಿಷಯದ ಹುದ್ದೆಗೆ ಮತ್ತು ವರ್ಗಾವಣಾ ಕಾಯ್ದೆಯ ಸೆಕ್ಷನ್-3 ಇರಡಿಯಲ್ಲಿ ವಿವರಿಸಿರುವಂತೆ ಜಿಲ್ಲೆಯಲ್ಲಿ ಅತೀ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಸ್ಥಳ ನಿಯುಕ್ತಿಗೊಳಿಸದೇ ಆಯಾ ವಲಯದಲ್ಲಿನ ಕಡಿಮೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಹಾಗೂ ಅಂತಹಾ ಶಾಲೆಯಲ್ಲಿ ಶಿಕ್ಷಕರ ಅಗತ್ಯತೆ ಇಲ್ಲದಿದ್ದರೂ ವರ್ಗಾವಣಾ ಕಾಯ್ದೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ.

ಈಗಾಗಲೇ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಪ್ರಸ್ತುತ ಸ್ಥಳ ನಿಯುಕ್ತಿಯಂತಹಾ ಕ್ರಮಗಳನ್ನು ಕೈಗೊಂಡಲ್ಲಿ ವರ್ಗಾವಣೆಗೆ ನಿಗಧಿಪಡಿಸಿದ ವಿಷಯವಾರು ಹಾಗೂ ತಾಲ್ಲೂಕುವಾರು ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುತ್ತದೆ. ಯಾವುದೇ ಶಿಕ್ಷಕರನ್ನು ಸ್ಥಳನಿಯುಕ್ತಿಗೊಳಿಸಿ ತಂತ್ರಾಂಶದಲ್ಲಿಯೇ ಕಡ್ಡಾಯವಾಗಿ ಮಾಹಿತಿಯನ್ನು ಇಂದೀಕರಿಸಬೇಕಾಗುತ್ತದೆ. ಆದರೆ ಪ್ರಸ್ತುತ ವರ್ಗಾವಣೆಯ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈಗಾಗಲೇ ಇ.ಇ.ಡಿ.ಎಸ್ ತಂತ್ರಾಂಶವನ್ನು ಪ್ರೀಝ್ ಮಾಡಲಾಗಿರುವುದರಿಂದ ಇಡೀ ವರ್ಗಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅಮಾನತ್ತುಗೊಂಡಿರುವ ಶಿಕ್ಷಕರುಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಆಯುಕ್ತರ ಅನುಮೋದನೆ ಇಲ್ಲದೇ ಅಮಾನತ್ತು ತೆರವುಗೊಳಿಸಿ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಅವಕಾಶವಿರುವುದಿಲ್ಲ.

ಒಂದು ವೇಳೆ ಅಮಾನತ್ತು ಪ್ರಕರಣಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದಲ್ಲಿ ಅಂತಹಾ ಪ್ರಕರಣಗಳಲ್ಲಿ ಕೂಡಲೆ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಇಲಾಖಾ ಕ್ರಮವನ್ನು ಸಮರ್ಥಿಸಿಕೊಂಡು ನ್ಯಾಯಾಲಯಕ್ಕೆ ಕಂಡಿಕವಾರು ಉತ್ತರ ಮತ್ತು ಆಕ್ಷೇಪಣಾ ಹೇಳಿಕೆಯನ್ನು ತುರ್ತಾಗಿ ಸಲ್ಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ಅಗತ್ಯ ಕ್ರಮವಹಿಸತಕ್ಕದ್ದು. ಒಂದು ವೇಳೆ ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಲೇಬೇಕಾದಲ್ಲಿ ಅಂತಹಾ ಶಿಕ್ಷಕರ ಪಟ್ಟಿಯನ್ನು ಸೂಕ್ತ ಕಾರಣಗಳೊಂದಿಗೆ ಮಾನ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸತಕ್ಕದ್ದು.

ಅಲ್ಲದೇ ಇದುವರೆಗೆ ಅಮಾನತ್ತಿನಲ್ಲಿ ಮುಂದುವರೆದಿರುವ ಶಿಕ್ಷಕರ ಸಂಪೂರ್ಣ ಸೇವಾ ವಿವರಗಳ ( ಕೆ.ಜಿ.ಐ.ಡಿ.ಬೋಧನಾ ವಿಷಯ. ಶಿಕ್ಷಕರ ವೃಂದ ಅಮಾನತ್ತುಗೊಳ್ಳಲು ಕಾರಣ, ಅಮಾನತ್ತು ಆದಾಗ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ವಲಯ, ಶಾಲೆಯ ಡೈಸ್ ಸಂಖ್ಯೆ, ಅಮಾನತ್ತುಗೊಂಡ ದಿನಾಂಕ ಇತ್ಯಾದಿ) ಪಟ್ಟಿಯನ್ನು ದಿನಾಂಕ 02-05-2024 ರ ಒಳಗಾಗಿ ಇಮೇಲ್ ಮೂಲಕ ಕಳುಹಿಸಲು ತಿಳಿಸಿದೆ.

Share.
Exit mobile version