ಬೆಂಗಳೂರು: ವಕೀಲರಾದ ದೇವರಾಜೇಗೌಡ ಎಂಬುವವರು ನಿಯಮಾವಳಿಗಳ ವಿರುದ್ಧವಾಗಿ ವಕೀಲ ವೃತ್ತಿಗೆ ಅಗೌರವ ತಂದು ತನ್ನ ಕಕ್ಷಿದಾರ ನೀಡಿದ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಸಮಾಜದಲ್ಲಿ ಅಶಾಂತಿಯುಂಟು ಮಾಡಿರುವುದರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ತುರ್ತಾಗಿ ಕ್ರಮಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಲಾಗಿದೆ.

ಇಂದು ಈ ಕುರಿತಂತೆ ವಕೀಲ ಸೂರ್ಯ ಮುಕುಂದರಾಜ್, ಟಿ.ಎಸ್ ಸತ್ಯಾನಂದ ಅವರು ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದಾರೆ. ಅದರಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ಘನತೆ ಮತ್ತು ಗೌರವವಿದ್ದು, ವಕೀಲ ವೃತ್ತಿ ಸದರಿ ವ್ಯವಸ್ಥೆಯ ಭಾಗವಾಗಿ ತನ್ನದೇ ಆದ ವೃತ್ತಿ ಗಾಂರ್ಭೀಯತೆಯನ್ನು ಹೊಂದಿದೆ. ವಕೀಲರಾದ ನಾವುಗಳು ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಾಂವಿಧಾನಿಕವಾಗಿ ಹಲವು ನಿಯಮಗಳನ್ನು ರೂಪಿಸಿಕೊಂಡಿದ್ದು, ರಾಷ್ಟ್ರೀಯ ವಕೀಲ ಪರಿಷತ್ತು ಹಾಗೂ ರಾಜ್ಯ ವಕೀಲ ಪರಿಷತ್ತ್ ಅನ್ನು ರೂಪಿಸಿಕೊಂಡು ಸಾಂಸ್ಥಿಕ ಸ್ವಾಯತ್ತ ಸಂಸ್ಥೆಗಳನ್ನು ಹೊಂದಿದ್ದು, ಅದರ ಮೂಲಕ ಹಲವು ನಿಯಮಾವಳಿಗಳನ್ನು ವಕೀಲ ವೃತ್ತಿಗೆ ಸಂಬಂಧಿಸಿದಂತೆ ರೂಪಿಸಿಕೊಂಡಿದ್ದೇವೆ ಎಂದಿದ್ದಾರೆ.

ಮೇಲ್ಕಂಡ ಸ್ವಾಯತ್ತ ಸಂಸ್ಥೆಗಳ ಜೊತೆಗೆ ಸಂಸತ್ತು ರೂಪಿಸಿದ ಕಾನೂನಿನ್ವಯ ನ್ಯಾಯಾಲಯದ ಅಧಿಕಾರಿಗಳಾದ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದು, ನ್ಯಾಯಾಧೀಶರು ಮತ್ತು ಕಕ್ಷಿದಾರರ ನಡುವೆ ಪ್ರಬಲ ಕೊಂಡಿಯಾಗಿ ನ್ಯಾಯಧಾನ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಅತ್ಯಂತ ಪ್ರಾಧಾನ್ಯವಾದ ಸ್ಥಾನವನ್ನು ಹೊಂದಿದೆ. ವಕೀಲ ವೃತ್ತಿಯನ್ನು ನಡೆಸುವಾಗ ಕಾನೂನಿನ ನಿಯಮಾವಳಿಗಳನ್ನು ಅರ್ಥೈಸಿಕೊಂಡು ಕಕ್ಷಿದಾರರ ಹಿತವನ್ನು ಕಾಪಾಡಲು ಬದ್ಧರಾಗಿ ಅವರು ಮತ್ತು ವೃತ್ತಿಪರ ವಕೀಲರ ನಡುವೆ ನಡೆಯುವ ಸಂಭಾಷಣೆಯ ಗೌಪ್ಯತೆಯನ್ನು ಕಾಪಾಡುವ ಹೊಣೆಯನ್ನು ಹೊಂದಿರುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಇತ್ತಿಚೆಗೆ ನಡೆದಿರುವ ಸಮಾಜದಲ್ಲಿ ಅತ್ಯಂತ ತಲೆತಗ್ಗಿಸುವ ಅಶ್ಲೀಲ ಪ್ರಕರಣವೊಂದು ಸಾರ್ವಜನಿಕವಾಗಿ ಬಹು ಚರ್ಚಿತವಾಗಿದ್ದು, ದಿನಂಪ್ರತಿ ಸದರಿ ವಿಚಾರ ಜನಮಾನಸದಲ್ಲಿ ತಲೆ ತಗ್ಗಿಸುವ ರೀತಿ ವರದಿಯಾಗುತ್ತಿದೆ. ಈ ಸಂಬಂಧ ಸದರಿ ಪ್ರಕರಣದ ಕೂಲಂಕಷ ತನಿಖೆಗೆ ಘನ ಸರ್ಕಾರ ವಿಶೇಷ ತನಿಖಾ ತಂಡವನ್ನು ರೂಪಿಸಿ ವಿಸ್ತೃತವಾದ ತನಿಖೆಯನ್ನು ಕೈಗೊಂಡಿದೆ. ಆದರೆ ಈ ಪ್ರಕರಣಕ್ಕೆ ತಳಕು ಹಾಕಿಕೊಂಡ ಹಾಗೆ ಈ ಹಿಂದೆ ಸದರಿ ಪ್ರಕರಣದಲ್ಲಿ ಘನ ನ್ಯಾಯಾಲಯದಲ್ಲಿ ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರು ಹೂಡಿದ್ದ ಅಸಲು ದಾವೆಯಲ್ಲಿ ಎದುರುದಾರರಾಗಿರುವ ಕಾರ್ತಿಕ್ ಎಂಬುವವರ ಪರವಾಗಿ ವಕಾಲತ್ತಿನ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆ ಹಾಗೂ ಕೆಲವು ಡಿಜಿಟಲ್ ಪೆನ್ ಡ್ರೈವ್, ಸಿ.ಡಿಗಳನ್ನು ಪಡೆದು ಸದರಿ ಎಲ್ಲಾ ವಿಚಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪಡೆದುಕೊಂಡಿದ್ದ ಪ್ರಕಣದ ಎದುರುದಾರರ ವಕೀಲರಾದ ಶ್ರೀ ದೇವರಾಜೇಗೌಡ ಎಂಬುವವರು ತಮ್ಮ ಕಕ್ಷಿದಾರರು ನೀಡಿದ ಮಾಹಿತಿಗಳನ್ನು, ದಾಖಲಾತಿಗಳನ್ನು ಹಾಗೂ ಡಿಜಿಟಲ್ ಸಾಕ್ಷಿಗಳಲ್ಲಿ ದಾಖಲಾಗಿದ್ದ ವೀಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ವಕೀಲರ ವೃತ್ತಿಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ಘೋರ ಅಪರಾಧವೆಸಗಿದ್ದಾರೆ ಎಂದಿದ್ದಾರೆ.

ಮೇಲ್ಕಂಡ ಮಾಹಿತಿಗಳನ್ನು ಸ್ವತ: ವಕೀಲರಾದ ದೇವರಾಜೇಗೌಡರವರು ಮಾಧ್ಯಮಗಳಲ್ಲಿ ತಿಳಿಸಿರುವಂತೆ ಕಳೆದ ಒಂದೂವರೆ ವರ್ಷಗಳಿಂದ ತಮ್ಮ ಬಳಿ ಇಟ್ಟುಕೊಂಡಿದ್ದು, ಯಾವುದೇ ನ್ಯಾಯಾಲಯಕ್ಕೆ ಸದರಿ ಮಾಹಿತಿಗಳನ್ನು ಸಲ್ಲಿಸದೇ ಕಕ್ಷಿದಾರರ ಗಮನಕ್ಕೆ ತಾರದೇ ತಾವು ಪ್ರತಿನಿಧಿಸುವ ರಾಜಕೀಯ ಪಕ್ಷದ ಮುಖಂಡರುಗಳಿಗೆ ಪತ್ರ ಮುಖೇನ ಹಂಚಿಕೊಂಡು ರಾಜಕೀಯ ಲಾಭಗಳಿಸಲು ಪ್ರಯತ್ನಿಸಿದ್ದಾರೆ. ಹಲವು ಮಾಧ್ಯಮಗೋಷ್ಠಿಗಳಲ್ಲಿ ಸದರಿ ಡಿಜಿಟಲ್ ಮಾಹಿತಿಗಳನ್ನು ಮಾಧ್ಯಮದ ಮೂಲಕ ಬಹಿರಂಗಗೊಳಿಸುತ್ತಾ ವಕೀಲ ವೃತ್ತಿಯ ಪಾವಿತ್ರತೆಯನ್ನು ಹಾಳುಗೆಡವಿರುತ್ತಾರೆ ಎಂದು ತಿಳಿಸಿದ್ದಾರೆ.

ಭಾರತೀಯ ಸಾಕ್ಷಿ ಅಧಿನಿಯಮದ ಕಲಂ 126 ರಂತೆ ಕಕ್ಷಿದಾರ ಮತ್ತು ವೃತ್ತಿಪರ ವಕೀಲರ ನಡುವೆ ನಡೆದ ಸಂಭಾಷಣೆ, ಸ್ವೀಕರಿಸಿದ ದಾಖಲೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಕಕ್ಷಿದಾರನ ಒಪ್ಪಿಗೆ ಇಲ್ಲದೇ ಅದನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಹಾಗೂ ಸಾರ್ವಜನಿಕಗೊಳಿಸುವಂತಿಲ್ಲ. ಇದರ ಸ್ಪಷ್ಟ ಅರಿವು ವಕೀಲರಾದ ದೇವರಾಜೇಗೌಡರವರಿಗೆ ಇದ್ದರೂ ಎಲ್ಲಾ ಮಾಹಿತಿಯನ್ನು ಹೊರಗೆಡವಿ ಹಲವು ಮಹಿಳೆಯರ ಮಾನಹಾನಿಗೆ ದುಷ್‌ಪ್ರೇರಕರಾಗಿದ್ದಾರೆ. ಇದರ ಜೊತೆಗೆ ತನಿಖಾ ಸಂಸ್ಥೆಗಳ ಮೇಲೆ ಪುಂಕಾನುಪುಂಕವಾಗಿ ಆರೋಪಗಳನ್ನು ಮಾಡುತ್ತಾ ರಾಜಕೀಯ ದುರುದ್ದೇಶ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.

ದೇವರಾಜೇಗೌಡ ರವರು ತಮ್ಮ ಕಕ್ಷಿದಾರ ಕಾರ್ತಿಕ್ ರವರು ನೀಡಿದ ದಾಖಲಾತಿ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಅವರು ಸ್ವೀಕರಿಸಿದ ಮರು ಕ್ಷಣವೇ ನ್ಯಾಯಾಲಯಕ್ಕೆ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಗೆ ಕಾನೂನು ರೀತಿ ಹಸ್ತಾಂತರಿಸಿ ಕ್ರಮಕೈಗೊಂಡಿದ್ದರೆ ಇಂದು ರಾಜ್ಯದಲ್ಲಿ ನಡೆಯುತ್ತಿರುವ ಅಶ್ಲೀಲ ಪ್ರಕರಣದ ಘಟನಾವಳಿಗಳು ಗೌಪ್ಯತೆಯಿಂದ ಕೂಡಿದ್ದು ನ್ಯಾಯಾಲಯದ ಪರಿಧಿಯಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ಸಿಆರ್‌ಪಿಸಿ ಕಲಂ 200 ರಡಿ ಖಾಸಗಿ ದೂರು ದಾಖಲಿಸಿ ಆರೋಪಿಗೆ ನ್ಯಾಯಾಲಯದ ಮೂಲಕ ಸಮನ್ಸ್ ಜಾರಿಗೊಳಿಸಿ ಸೂಕ್ತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೆ ಈ ಪ್ರಕರಣದಲ್ಲಿ ಮಹಿಳೆಯ ಮಾನಹಾನಿಯನ್ನು ತಪ್ಪಿಸಬಹುದಿತ್ತು. ಆದರೆ ಇದೆಲ್ಲವನ್ನು ಮೀರಿ ತಮ್ಮ ರಾಜಕೀಯ ಎದುರಾಳಿಯಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣರವರ ವಿರುದ್ಧ ಅವರ ವಿರೋಧಿಗಳ ಜೊತೆ ಕೈಜೋಡಿಸಿ ತನ್ನ ಕಕ್ಷಿದಾರ ನೀಡಿದ ಡಿಜಿಟಲ್ ಮಾಹಿತಿಗಳನ್ನು ಪೆನ್‌ ಡ್ರೈವ್ ಮೂಲಕ ಸಾರ್ವತ್ರಿಕಗೊಳಿಸಿ ಅಪರಾಧ ವೆಸಗಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ದುರುಪಯೋಗ ಪಡಿಸಿಕೊಂಡು ಇಂತಹ ದುಷ್‌ಕೃತ್ಯ ಎಸಗಿರುವ ದೇವರಾಜೇಗೌಡ ರವರು ವಕೀಲ ವೃತ್ತಿಯ ಪ್ರಾವಿತ್ರತೆಗೆ ಧಕ್ಕೆಯನ್ನು ತಂದಿದ್ದಾರೆ ಎಂದು ಹೇಳಿದ್ದಾರೆ.

ದಿನಾಂಕ: 06-05-2024 ರಂದು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ವಕೀಲರ ವಸ್ತ್ರ ಸಂಹಿತೆಯ ದ್ಯೋತಕವಾದ ಕಪ್ಪು ಕೋಟ್ ಧರಿಸಿ ಸುದ್ದಿಗೋಷ್ಟಿ ನಡೆಸಿದ  ದೇವರಾಜೇಗೌಡ ರವರು ಸ್ಪಷ್ಟವಾಗಿ ಮಾಧ್ಯಮಗಳ ಮುಂದೆ ತನ್ನ ಬಳಿ ಕಾರ್ತಿಕ್ ನೀಡಿದ್ದ ಡಿಜಿಟಲ್ ದಾಖಲಾತಿಗಳಲ್ಲಿ 2856 ಮಹಿಳೆಯ ಅಶ್ಲೀಲ ಚಿತ್ರಗಳಿದ್ದು, ತನ್ನ ಬಳಿ ಇದೆ. ನನಗೆ ಶ್ರೀ ಕಾರ್ತಿಕ್ ರವರು ವಕಾಲತ್ತು ನೀಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಸದರಿ ದೃಶ್ಯಾವಳಿಗಳು ತನ್ನ ಕಛೇರಿಯಲ್ಲಿ ತನ್ನನ್ನು ಭೇಟಿ ಮಾಡಲು ಬಂದಿದ್ದ ಕಕ್ಷಿದಾರರು ನೀಡುವ ಮಾಹಿತಿಯ ಸಂದರ್ಭದ ದೃಶ್ಯಾವಳಿಗಳು ಎಂಬುದನ್ನು ತಿಳಿಸಿರುತ್ತಾರೆ. ಅದೇ ರೀತಿ ಕೆಲವು ರಾಜಕಾರಣಿಗಳ ಜೊತೆ ತಾವು ನಡೆಸಿದ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಬಿಡುಗಡೆಗೊಳಿಸಿರುತ್ತಾರೆ. ಸದರಿ ಸಂಭಾಷಣೆಯಲ್ಲು ಕಾರ್ತಿಕ್ ರವರು ಕಕ್ಷಿದಾರರಾಗಿ ಇವರಿಗೆ ನೀಡಿದ್ದ ಮಾಹಿತಿಗಳ ಸ್ಪಷ್ಟ ನಮೂದನ್ನು ತಿಳಿಸಿದ್ದು, ಅದನ್ನು ಉಪಯೋಗಿಸಿಕೊಂಡು ಪ್ರಕರಣಕ್ಕೆ ಸಂಬಂಧವಿಲ್ಲದ ಅಧಿಕಾರಸ್ತ ರಾಜಕಾರಣಿಗಳಿಂದ ಅನುಚಿತ ಲಾಭ ಪಡೆಯಲು ಅವಣಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದಿದ್ದಾರೆ.

ಒಬ್ಬ ವಕೀಲರಾಗಿ ತನ್ನ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತುವಹಿಸಿ ಕಾನೂನಿನಂತೆ ಕರ್ತವ್ಯ ನಿರ್ವಹಿಸಬೇಕಾದ ದೇವರಾಜೇಗೌಡ ರವರು ತನ್ನ ಕಕ್ಷಿದಾರರ ಮಾಹಿತಿಗಳನ್ನು ಸಾರ್ವತ್ರಿಕರಣಗೊಳಿಸಿ ಹಲವು ಕುಟುಂಬಗಳ ಮಹಿಳೆಯರ ಮಾನಹಾನಿ ಮಾಡುವುದರ ಜೊತೆಗೆ ಸದರಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾದಳದ ಅಧಿಕಾರಿಗಳ ವಿರುದ್ಧವೇ ಗುರುತರ ಆರೋಪಗಳನ್ನು ವ್ಯಕ್ತಪಡಿಸುತ್ತಾ ವಕೀಲ ವೃತ್ತಿಗೆ ಕಳಂಕ ತಂದಿದ್ದು ವೃತ್ತಿದೂರು ನಡತೆ ತೋರಿದ್ದಾರೆ ಎಂದು ಹೇಳಿದ್ದಾರೆ.

ವಕೀಲ ವೃತ್ತಿಯನ್ನು ನಿರ್ವಹಿಸಲು ಮತ್ತು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ವಕೀಲರು ಬದ್ಧರಾಗಿ ಕರ್ನಾಟಕ ವಕೀಲರ ಪರಿಷತ್ತಿನಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳುವಾಗ ಪ್ರಮಾಣ ಮಾಡಿರುತ್ತೇವೆ. ಆದರೆ ಸದರಿ ವೃತ್ತಿಪರತೆಯನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಂಡು ಕಕ್ಷಿದಾರನ ಮಾಹಿತಿಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಇದರ ಬಗ್ಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆದ್ಯತೆ ಮೇಲೆ ಪ್ರಕರಣವನ್ನು ನಿರ್ವಹಿಸಿ ವಕೀಲರ ದೇವರಾಜೇಗೌಡ ಹಾಗೂ ಅವರ ಕಕ್ಷಿದಾರರಾದ ಕಾರ್ತಿಕ್ ರವರುಗಳ ಹೇಳಿಕೆಗಳನ್ನು ಪಡೆದು ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮಕೈಗೊಂಡು ವಕೀಲ ವೃತ್ತಿಯ ಪಾವಿತ್ರತೆಯನ್ನು ಎತ್ತಿಹಿಡಿದು ಸಮಾಜದಲ್ಲಿ ವಕೀಲ ವೃತ್ತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಕ್ರಮವಹಿಸುವಂತೆ ಈ ಮೂಲಕ ಕೋರಿದ್ದಾರೆ.

ನಾಳೆ ಬೆಳಗ್ಗೆ 10.30ಕ್ಕೆ ‘SSLC’ ಫಲಿತಾಂಶ ಪ್ರಕಟ : ಈ ರೀತಿ ‘ರಿಸಲ್ಟ್’ ಚೆಕ್ ಮಾಡಿ | Karnataka SSLC Exam results 2024

ಕಾಂಗ್ರೆಸ್ ನ ‘ಗ್ಯಾರಂಟಿ ಯೋಜನೆಗಳೇ’ ನನ್ನ ಕೈ ಹಿಡಿಯುತ್ತವೆ : ಗೀತಾ ಶಿವರಾಜ್ ಕುಮಾರ ವಿಶ್ವಾಸ

Share.
Exit mobile version