ನವದೆಹಲಿ: ಇನ್ಫೋಸಿಸ್‌ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಗುರುವಾರ ತಮ್ಮ ಪತಿ ಎನ್ ಆರ್ ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಸಂಸತ್ ಭವನದ ತಮ್ಮ ಕೊಠಡಿಯಲ್ಲಿ ಪ್ರಮಾಣ ವಚನ ಬೋಧಿಸಿದರು. ಸದನದ ನಾಯಕ ಪಿಯೂಷ್ ಗೋಯಲ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷ ಮತ್ತು ಮಕ್ಕಳಿಗಾಗಿ ಹಲವಾರು ಪುಸ್ತಕಗಳ ಲೇಖಕರಾಗಿರುವ 73 ವರ್ಷದ ಮೂರ್ತಿ ಅವರನ್ನು ಕಳೆದ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.

ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಗೆ ಭಾಜನರಾಗಿದ್ದಾರೆ.

Share.
Exit mobile version