ಬೆಂಗಳೂರು: ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್‌ ಬರ-ಪ್ರವಾಹ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಚಿಪ್ಪು ನೀಡಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರಪೂರ ಪರಿಹಾರ ನೀಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ‌ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಿಗೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಈ ಮೊದಲು ಮಾರ್ಗಸೂಚಿ ಪ್ರಕಾರ, 4,860 ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿ ಈಗ ಕೇಂದ್ರ ಸರ್ಕಾರ 3,454 ಕೋಟಿ ರೂ. ನೀಡಿದ ನಂತರ 18,172 ಕೋಟಿ ರೂ. ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಎರಡು ನಾಲಿಗೆ ಹೊಂದಿದ್ದು, ಈ ಸರ್ಕಾರ ತೊಲಗಬೇಕು, ಕಾಂಗ್ರೆಸ್‌ ತೊಲಗಲಿ, ಇಲ್ಲವಾದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದರು.

ಕಾಲುಭಾಗ ಹಣ ಬಿಡುಗಡೆ

2004-05 ರಲ್ಲಿ ಬರ ಬಂದಾಗ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ 1147.70 ಕೋಟಿ ರೂ. ಗೆ ಮನವಿ ಮಾಡಿದ್ದು, ಅಂದಿನ ಮನಮೋಹನ್‌ ಸಿಂಗ್‌ ಸರ್ಕಾರ 63 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ 10.07% ಮಾತ್ರ ಸಿಕ್ಕಿತ್ತು. 2005-06 ರಲ್ಲಿ ಪ್ರವಾಹ ಬಂದಾಗ, 4897 ಕೋಟಿ ರೂ. ಕೇಳಿದ್ದು, 358 ಕೋಟಿ ರೂ. ಮಾತ್ರ ನೀಡಲಾಗಿತ್ತು. ಅಂದರೆ 9.08% ಮಾತ್ರ ಸಿಕ್ಕಿತ್ತು. 2006-07 ರಲ್ಲಿ ಬರ-ಪ್ರವಾಹಕ್ಕೆ 2858 ಕೋಟಿ ರೂ. ಕೇಳಿದ್ದು, ಮನೆಹಾಳ ಕಾಂಗ್ರೆಸ್‌ 226 ಕೋಟಿ ರೂ. ಅಂದರೆ 11.89% ನೀಡಿತ್ತು. 2007-08 ರಲ್ಲಿ ಪ್ರವಾಹ ಆದಾಗ 406 ಕೋಟಿ ರೂ. ಕೇಳಿದ್ದು, ಕಾಂಗ್ರೆಸ್‌ ನಯಾಪೈಸೆಯನ್ನೂ ನೀಡಲಿಲ್ಲ. ಇದೇ ವರ್ಷ ಆಗಸ್ಟ್‌ನಲ್ಲಿ 1510 ಕೋಟಿ ರೂ. ಕೇಳಿದ್ದು, ಆಗಲೂ ಮೂರು ನಾಮ ಹಾಕಿದ ಕಾಂಗ್ರೆಸ್‌ ಕೇವಲ ಚಿಪ್ಪು ನೀಡಿತ್ತು ಎಂದು ವಿವರಿಸಿದರು.

2008-09 ರಲ್ಲಿ ಬರಕ್ಕಾಗಿ 516.72 ಕೋಟಿ ರೂ. ಕೇಳಿದರೆ ಕೇವಲ 1.86 ಕೋಟಿ ರೂ. ನೀಡಿ ಗಂಜಿ ಕುಡಿಯಲು ಕೂಡ ಹಣವಿಲ್ಲದಂತೆ ಕಾಂಗ್ರೆಸ್‌ ಮಾಡಿತ್ತು. 2009-10 ರಲ್ಲಿ 7759 ಕೋಟಿ ರೂ. ಕೇಳಿದ್ದರೆ, 1698 ಕೋಟಿ ರೂ. ನೀಡಲಾಗಿತ್ತು. 2010-11 ರಲ್ಲಿ 1045 ಕೋಟಿ ರೂ. ನೀಡಲು ಮನವಿ ಮಾಡಿದ್ದು, ಆಗ ನಯಾಪೈಸೆಯನ್ನೂ ನೀಡಲಿಲ್ಲ. 2011-12 ರಲ್ಲಿ 6415 ಕೋಟಿ ರೂ. ಕೇಳಿದ್ದು, 479 ಕೋಟಿ ರೂ. ನೀಡಿದ್ದು, ಕೇವಲ 7.47% ಆಗಿತ್ತು. 2012-13 ರಲ್ಲಿ 11,489 ಕೋಟಿ ರೂ. ಕೇಳಿದ್ದು, 4.62% ನಷ್ಟು ಮಾತ್ರ 530 ಕೋಟಿ ರೂ. ನೀಡಲಾಗಿತ್ತು. 2013-14 ರಲ್ಲಿ 2588 ಕೋಟಿ ರೂ. ಕೇಳಿದ್ದು, 468 ಕೋಟಿ ರೂ. ಅಂದರೆ 18% ಮಾತ್ರ ನೀಡಲಾಗಿತ್ತು. ಒಟ್ಟಾರೆಯಾಗಿ 2004-05 ರಿಂದ 2013-14 ನೇ ಸಾಲಿನವರೆಗೂ 44,838.59 ಕೋಟಿ ರೂ. ಕೇಳಿದ್ದು, ಕೇಂದ್ರದ ಕಾಂಗ್ರೆಸ್ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಕೇವಲ 3,579.22 ಕೋಟಿ ರೂ. ನೀಡಿದ್ದು, ಎಸ್‌ಡಿಆರ್‌ಎಫ್‌ ಸೇರಿ ಒಟ್ಟು 4,571.4 ಕೋಟಿ ರೂ. ಮಾತ್ರ ನೀಡಿತ್ತು. ಕರ್ನಾಟಕ ಸರ್ಕಾರ ಕೇಳಿದ್ದಕ್ಕೆ ಹೋಲಿಸಿದರೆ ಕೊಟ್ಟಿದ್ದು 10.20% ಮಾತ್ರ. ಇದು ಕಾಲುಭಾಗವೂ ಇಲ್ಲ ಎಂದು ದೂರಿದರು.

ಈ ಅಂಕಿ ಅಂಶ ನಿಜವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನಕ್ಕೆ ಗೌರವ ತೋರಿಸಬೇಕು ಎಂದು ಆಗ್ರಹಿಸಿದರು.

ಮೋದಿ ಸರ್ಕಾರದಿಂದ ಹೆಚ್ಚು ಹಣ

ಸದಾ ನಿದ್ದೆ ಮಾಡುವ ಸಿದ್ದರಾಮಯ್ಯನವರಿಗೆ ನರೇಂದ್ರ ಮೋದಿ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. 2014-15 ರಲ್ಲಿ 779 ಕೋಟಿ ರೂ. ಕೇಳಿದ್ದು, 417.74 ಕೋಟಿ ರೂ. ಅಂದರೆ 53.63% ರಷ್ಟು ನೀಡಲಾಗಿದೆ. 2015-16 ರಲ್ಲಿ 3831 ಕೋಟಿ ರೂ. ಕೇಳಿದ್ದು, 1853 ಕೋಟಿ ರೂ. ಅಂದರೆ 48.37% ರಷ್ಟು ನೀಡಲಾಗಿದೆ. 2016-17 ರಲ್ಲಿ 4703 ಕೋಟಿ ರೂ. ಕೇಳಿದ್ದು, 2510 ಕೋಟಿ ರೂ. ಅಂದರೆ 53.37% ರಷ್ಟು ನೀಡಲಾಗಿದೆ. 2017-18 ರಲ್ಲಿ 3697.26 ಕೋಟಿ ರೂ. ಕೇಳಿದ್ದು, 1141.04 ಕೋಟಿ ರೂ. ಅಂದರೆ 30.86% ರಷ್ಟು ನೀಡಲಾಗಿದೆ. 2018-19 ರಲ್ಲಿ 2434 ಕೋಟಿ ರೂ. ಕೇಳಿದ್ದು, 1248 ಕೋಟಿ ರೂ. ಅಂದರೆ 51.27% ರಷ್ಟು ನೀಡಲಾಗಿದೆ. 2019-20 ರಲ್ಲಿ 3837.76 ಕೋಟಿ ರೂ. ಕೇಳಿದ್ದು, 3412 ಕೋಟಿ ರೂ. ಅಂದರೆ 88.91% ರಷ್ಟು ನೀಡಲಾಗಿದೆ. 2020-21 ರಲ್ಲಿ 2242.48 ಕೋಟಿ ರೂ. ಕೇಳಿದ್ದು, 1480 ಕೋಟಿ ರೂ. ಅಂದರೆ 66% ರಷ್ಟು ನೀಡಲಾಗಿದೆ. 2021-22 ರಲ್ಲಿ 2122.85 ಕೋಟಿ ರೂ. ಕೇಳಿದ್ದು, 2255.8 ಕೋಟಿ ರೂ. ಅಂದರೆ 106.26% ರಷ್ಟು ನೀಡಲಾಗಿದೆ. 2022-23 ರಲ್ಲಿ 1944 ಕೋಟಿ ರೂ. ಕೇಳಿದ್ದು, 1603 ಕೋಟಿ ರೂ. ಅಂದರೆ 82.46% ರಷ್ಟು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ಹಣ ನೀಡಿ

ಪ್ರಧಾನಿ ನರೇಂದ್ರ ಮೋದಿ ಯಾವುದೇ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಿ ಬೇರೆ ರಾಜ್ಯಗಳಿಗೆ ಕಳುಹಿಸಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಫ್ರೂಟ್‌ ತಂತ್ರಜ್ಞಾನ ಬಳಸದೆ ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರ ಕೂಡ 3454 ಕೋಟಿ ರೂ. ಹಣ ನೀಡಬೇಕು. ಬಿಜೆಪಿ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿದಂತೆ ರಾಜ್ಯ ಸರ್ಕಾರ ಕೂಡ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲವಾದರೆ ಪಾಪರ್‌ ಸರ್ಕಾರ ಎಂದು ನಾನೇ ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಸಿದರು.

BREAKING: ಹಾಸನ ‘ಪೆನ್ ಡ್ರೈವ್’ ಕೇಸ್: ತನಿಖೆಗೆ ‘SIT ತಂಡ’ ರಚಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ

ಚುನಾವಣಾ ಪ್ರಚಾರ ಗೀತೆಯನ್ನು ಮಾರ್ಪಡಿಸುವಂತೆ AAPಗೆ ಚುನಾವಣಾ ಆಯೋಗ ಆದೇಶ

Share.
Exit mobile version