ಬಾಗಲಕೋಟೆ: ಮನೆ ಮುಂಭಾಗ ಆಟವಾಡುತ್ತಿದ್ದ 18 ತಿಂಗಳ ಪುಟ್ಟ ಕಂದಮ್ಮ ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂ.38 ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದು, ಪೋಷಕರ ನೋವು ಎಲ್ಲರ ಹೃದಯ ಮುಟ್ಟಿದೆ.
ಮೃತ ಬಾಲಕಿಯನ್ನು ಅಮೀನಾ ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ವೇಳೆ ಆಕೆ ಪಕ್ಕದ ಮನೆಯ ನೀರಿನ ಟ್ಯಾಂಕ್ಗೆ ಆಕಸ್ಮಿಕವಾಗಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಮಗುವಿನ ಮೃತದೇಹವನ್ನು ಟ್ಯಾಂಕ್ನಿಂದ ಹೊರತೆಗೆದ ಬಳಿಕ, ಆಕೆ ಮತ್ತೆ ಬದುಕಿ ಬರಬಹುದು ಎಂಬ ಆಶಯದಲ್ಲಿ ಪೋಷಕರು ಅಸಾಮಾನ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಯಾರೋ ನೀಡಿದ ಸಲಹೆಯಂತೆ, ಮೃತದೇಹವನ್ನು ಉಪ್ಪಿನಲ್ಲಿ ಇಟ್ಟರೆ ಮರುಜೀವ ಸಿಗಬಹುದು ಎಂಬ ನಂಬಿಕೆಯಿಂದ ಮಗುವಿನ ಮುಖವನ್ನು ಹೊರಗಿಟ್ಟು ದೇಹದ ಉಳಿದ ಭಾಗವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದಾರೆ.
ಇದರ ಜೊತೆಗೆ, ಮಗುವಿನ ಕಿವಿಯ ಬಳಿ ಮೊಬೈಲ್ ಫೋನ್ ನಲ್ಲಿ ಕುರಾನ್ ಪಠಣ ಹಾಗೂ ಭಗವದ್ಗೀತೆ ಮಂತ್ರವನ್ನು ಪ್ಲೇ ಮಾಡಿ, ಪಕ್ಕದಲ್ಲೇ ಕುಳಿತು ಆಕೆ ಮತ್ತೆ ಕಣ್ಣು ತೆರೆಯಲಿ ಎಂದು ಪ್ರಾರ್ಥಿಸುತ್ತಿದ್ದರು. ತಮ್ಮ ಏಕೈಕ ಕಂದಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಪೋಷಕರು ಸಂಪೂರ್ಣವಾಗಿ ಕುಸಿದು ಹೋಗಿದ್ದು, ಅವರ ಆಕ್ರಂದನ ಕಂಡವರ ಕಣ್ಣಲ್ಲೂ ನೀರು ತರಿಸಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.








