ನವದೆಹಲಿ:ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ಸ್ಫೋಟವು ಕೇವಲ ಆಕಸ್ಮಿಕವಲ್ಲ, ಬದಲಿಗೆ ಇದು ಅಲ್-ಖೈದಾ ಸಂಘಟನೆಗೆ ಸಂಯೋಜಿತವಾಗಿರುವ ಭಯೋತ್ಪಾದಕ ಗುಂಪಿನ ವ್ಯವಸ್ಥಿತ ಸಂಚು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಹಿರಂಗಪಡಿಸಿದೆ. ಈ ಸಂಚಿಗೆ ‘ಹೆವನ್ಲಿ ಹಿಂದ್’ (Heavenly Hind) ಎಂಬ ಕೋಡ್ ನೇಮ್ ನೀಡಲಾಗಿತ್ತು ಎಂದು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಅಲ್-ಖೈದಾದಿಂದ ಪ್ರೇರಿತವಾದ ಗುಂಪು ಭಾರತದ ಪ್ರಮುಖ ಐತಿಹಾಸಿಕ ಸ್ಮಾರಕಗಳು ಮತ್ತು ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸರಣಿ ಸ್ಫೋಟ ನಡೆಸಲು ಈ ಕಾರ್ಯಾಚರಣೆಯನ್ನು ರೂಪಿಸಿತ್ತು. ಕೆಂಪುಕೋಟೆ ಸ್ಫೋಟವು ಇದರ ಮೊದಲ ಭಾಗವಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಗಡಿಯಾಚೆಗಿನ ಲಿಂಕ್: ಈ ಕಾರ್ಯಾಚರಣೆಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಲ್-ಖೈದಾ ಹ್ಯಾಂಡ್ಲರ್ಗಳು ಹಣಕಾಸು ನೆರವು ಮತ್ತು ತಾಂತ್ರಿಕ ಮಾರ್ಗದರ್ಶನ ನೀಡುತ್ತಿದ್ದರು.
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಬ್ರೈನ್ ವಾಶ್ ಮಾಡಿ ಈ ಗುಂಪಿಗೆ ಸೇರಿಸಿಕೊಳ್ಳಲಾಗಿತ್ತು ಎಂದು ಎನ್ಐಎ ಹೇಳಿದೆ.
ಕೇವಲ ಸ್ಫೋಟ ಮಾತ್ರವಲ್ಲದೆ, ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮತ್ತು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಸಂಘಟನೆ ಸಂಚು ರೂಪಿಸಿತ್ತು ಎಂಬ ಭಯಾನಕ ವಿಷಯ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳ ವಿಚಾರಣೆಯ ವೇಳೆ ‘ಹೆವನ್ಲಿ ಹಿಂದ್’ ಕಾರ್ಯಾಚರಣೆಯ ಸಂಪೂರ್ಣ ನೀಲನಕ್ಷೆ ಪತ್ತೆಯಾಗಿದೆ. ಸ್ಫೋಟಕಗಳನ್ನು ತಯಾರಿಸುವ ವಿಧಾನ ಮತ್ತು ಗುಪ್ತವಾಗಿ ಸಂದೇಶ ರವಾನಿಸುವ ಆ್ಯಪ್ಗಳ ಬಳಕೆಯ ಬಗ್ಗೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.








