ರಾಮನಗರ : ಹೆಚ್‌.ಡಿ ದೇವೇಗೌಡರ ಬಗ್ಗೆ ರಾಜಣ್ಣ ಆಕ್ಷೇಪಾರ್ಹ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿದ ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ, ರಾಜಣ್ಣಗೆ ದೇವೇಗೌಡರ ಹೆಸರು ಹೇಳುವ ಯೋಗ್ಯತೆಯಿಲ್ಲ. ದೇವೇಗೌಡರ ಆರೋಗ್ಯ ಹದಗೆಡಲು ಪರಮನೀಚ ಮನುಷ್ಯ ರಾಜಣ್ಣನೇ ಕಾರಣ ಎಂದು ಕಿಡಿಕಾರಿದ್ರು.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, “ಹೆಚ್‌.ಡಿ ದೇವೇಗೌಡರ ಕಾಲಿನ ಧೂಳಿಗೂ ಕೆ.ಎನ್‌ ರಾಜಣ್ಣ ಸಮವಲ್ಲ. ರಾಜಣ್ಣಗೆ ದೇವೇಗೌಡರ ಹೆಸರು ಹೇಳುವ ಯೋಗ್ಯತೆಯಿಲ್ಲ. ದೇವೇಗೌಡರ ಆರೋಗ್ಯ ಹದಗೆಡಲು ರಾಜಣ್ಣನೇ ಕಾರಣ. ಆಚಾರವಿಲ್ಲದ ನಾಲಿಗೆ ಅವರದ್ದು, ಪರಮನೀಚ ಮನುಷ್ಯ. ಈ ಮಾತುಗಳನ್ನ ನಾನು ಬಹಳ ನೋವಿಂದ ಹೇಳುತ್ತಿದ್ದೇನೆ” ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇನ್ನು “ಕೆ.ಎನ್‌ ರಾಜಣ್ಣನ ಬುದ್ಧಿ ನೋಡಿಯೇ ಮಧುಗಿರಿ ಜನ ಸೋಲಿಸಿದರು. 90 ವರ್ಷದ ವ್ಯಕ್ತಿ ಬದುಕಿರುವುದೇ ಹೆಚ್ಚು. ದೇವೇಗೌಡರಿಗೆ ರಾಜ್ಯದ ಜನತೆಗೆ ಒಳಿತು ಮಾಡಬೇಕು ಅನ್ನೋ ಮನಸ್ಸಿದೆ. ಓರ್ವ ಮಾಜಿ ಪ್ರಧಾನಿ ಎಂಬ ಕನಿಷ್ಠ ಗೌರವವಿಲ್ಲದೇ ಮಾತಾಡಿದ್ದಾರೆ. ರಾಜಣ್ಣ ಸಂಸ್ಕೃತಿ, ಸಂಸ್ಕಾರವಿಲ್ಲದ ಮನುಷ್ಯ. ಆಯಸ್ಸಿನ ಬಗ್ಗೆ ಮಾತನಾಡುತ್ತಾರೆ ಎಂದರೇ ಎಂತಹ ನೀಚ ಇರಬೇಕು. ರಾಜಣ್ಣ ದೇವೇಗೌಡರನ್ನ ಭೇಟಿಯಾಗುತ್ತೇನೆ ಎಂದಿದ್ದಾರೆ. ಆದ್ರೆ, ಭೇಟಿ ಮಾಡುವುದು ಬೇಡವೆಂದು ನಮ್ಮ ಮಾವನವರಿಗೆ ಹೇಳುತ್ತೇನೆ” ಎಂದರು.

Share.
Exit mobile version