ಬೆಂಗಳೂರು: ತಾನು ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ ದೇಶದ ದೊಡ್ಡ ಅತ್ಯಾಚಾರ ಪ್ರಕರಣ ಎಂಬುದಾಗಿ ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನಾಟೆ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು,  ಈ ದೇಶದಲ್ಲಿ ಯಾವುದೇ ಮಹಿಳೆಯ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. ಹಾಗೂ 500 ಮೀ ದೂರ ನಿಲ್ಲುತ್ತಾರೆ. ಮಹಿಳೆಯರು ಅತ್ತು ಕರೆದರೂ ಅವರಿಗೆ ಕೇಳಿಸುವುದಿಲ್ಲ. ದೇಶದ ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ 15 ದಿನ ಮೊದಲು ಪ್ರಜ್ವಲ್‌ ರೇವಣ್ಣ ಪರವಾಗಿ ಮತ ಕೇಳುತ್ತಾರೆ. ಒಂದೇ ವೇದಿಕೆಯನ್ನು ಹಂಚಿಕೊಂಡು ನಿಂತಿದ್ದಾರೆ. ಮೋದಿ ಅವರು ಇದೇ ಮೊದಲ ಬಾರಿಗೆ ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ ಎಂದರು.

ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್‌ ರೇವಣ್ಣ ಅವರು ಮೋದಿ ಪರಿವಾರದ ವ್ಯಕ್ತಿ. ಈತ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತದೆ. ತಾನು ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ ದೇಶದ ದೊಡ್ಡ ಅತ್ಯಾಚಾರ ಪ್ರಕರಣ. ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಕೇಲವೇ ಗಂಟೆಗಳಲ್ಲಿ ಎಸ್‌ ಐಟಿ ರಚನೆ ಮಾಡಿತು. ಈಗಾಗಲೇ ಎಸ್‌ ಐಟಿ ಆರೋಪಿಯ ತಂದೆ ರೇವಣ್ಣ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಆದರೆ ಈತ ಯಾರಿಗೂ ತಿಳಿಯದಂತೆ ದೇಶ ಬಿಟ್ಟು ಹೋಗಿದ್ದು ಹೇಗೆ? ಎಸ್‌ ಐಟಿ ರಚನೆ ಆಗುತ್ತದೆ ಎಂದು ತಿಳಿದು ಕೆಲವೇ ಗಂಟೆಗಳಲ್ಲಿ ತಪ್ಪಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು.

ಪ್ರಿಯಾಂಕ ಗಾಂಧಿ ಮಗಳನ್ನು ನೋಡಲು ಹೋಗುವುದು ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ. ಆದರೆ ಇಷ್ಟು ದೊಡ್ಡ ಆರೋಪಿ ತಪ್ಪಿಸಿಕೊಂಡು ಹೋಗುವುದು ಗೊತ್ತಾಗುದಿಲ್ಲವೇ? ಎಂದು ಕೇಳಿದರು.

ಪ್ರಧಾನಿ ಮೋದಿಯವರಿಗೆ ಈಗ ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಮೊದಲೇ ಗೊತ್ತಿತ್ತು. ಈತ ಎಂತವನು ಎಂಬುದು ಮೋದಿಯವರಿಗೆ ಗೊತ್ತಿತ್ತು. ಏಕೆಂದರೆ ಬಿಜೆಪಿ ನಾಯಕ ದೇವರಾಜೇಗೌಡ 2023 ಡಿಸೆಂಬರ್ ತಿಂಗಳಲ್ಲೇ ಮೋದಿ, ಜೆ.ಪಿ.ನಡ್ಡಾ ಮತ್ತು ಅಮಿತ್‌ ಶಾ ಇಬ್ಬರಿಗೂ ಪತ್ರ ಬರೆದಿದ್ದರು, ಈ- ಮೇಲ್‌ ಮಾಡಿದ್ದರು. 2024 ಜನವರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೈತ್ರಿ ಬೇಡ ಎಂದು ಎಲ್ಲಾ ಸಾಕ್ಷಿಗಳನ್ನು ನೀಡಿದ್ದರು ಎಂದರು.

ಈ ನೀಚ ವ್ಯಕ್ತಿ ಮನೆಗೆಲಸದವರು, ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇಷ್ಟೆಲ್ಲಾ ಗೊತ್ತಿದ್ದರೂ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈತನ ಕೈ ಹಿಡಿಯುತ್ತಾರೆ. ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಆಪಾದನೆ

ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕ ಕಾಂಗ್ರೆಸ್‌ ನಾಯಕರಿಗೆ ಪೆನ್ ಡ್ರೈವ್‌ ನೀಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಪ್ಪಟ ಸುಳ್ಳು ಹಾಗೂ ಆಧಾರರಹಿತ ಆರೋಪ. ಈತ ಹಂಚಿಕೊಂಡಿರುವುದು ಬಿಜೆಪಿ ನಾಯಕರಿಗೆ. ಇಂತಹ ಪಾಪದ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ನಿರ್ಲಜ್ಜ ಬಿಜೆಪಿ ನಾಯಕರು ಇನ್ನೂ ಸುಳ್ಳು ಹೇಳುತ್ತಿದ್ದಾರೆ. ಇಂತಹ ಜಾನುವಾರು ಗುಣದ, ರಾಕ್ಷಸನನ್ನು ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.

ದೇಶದ ಸಮಸ್ತ ಜನತೆ ಮೋದಿ ಅವರಲ್ಲಿ ಪ್ರಶ್ನೆ ಮಾಡುತ್ತೇವೆ. ಈತನ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ಹೇಗೆ ಮೌನವಾಗಿ ಇದ್ದರೀ? ಅವರ ಜೊತೆಯಲ್ಲಿ ನಿಲ್ಲುತ್ತೀರಿ, ಅವರ ಪರವಾಗಿ ಪ್ರಚಾರ ಮಾಡುತ್ತೀರಿ. ಇದೆಲ್ಲಾ ಹೇಗೆ ಸಾಧ್ಯ. ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ಸೇರಿದಂತೆ ಅನೇಕ ಕುಕೃತ್ಯಗಳು ನಡೆದರು ಪ್ರಧಾನಿ ಮೋದಿ ಅವರು ಮಹಿಳೆಯರ ಪರವಾಗಿ ನಿಲ್ಲುವುದಿಲ್ಲ ಬದಲಾಗಿ ಬಿಜೆಪಿ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಪರವಾಗಿ ನಿಲ್ಲುತ್ತಾರೆ ಎಂದರು.

ಕುಲದೀಪ್ ಸಿಂಗ್‌ ಸೆಂಗರ್ ಎನ್ನುವ ಶಾಸಕ ಹುಡುಗಿಯನ್ನು ಬಲತ್ಕಾರ ನಡೆಸಿ, ಕೊಲ್ಲುತ್ತಾನೆ ಆಗಲೂ ಮೋದಿ ಅವನ ಪರವಾಗಿ ನಿಲ್ಲುತ್ತಾರೆ. ಅಲಹಬಾದ್‌ ಹೈ ಕೋರ್ಟ್‌ ಮಧ್ಯ ಪ್ರವೇಶ ಮಾಡಿದ ನಂತರ ಕ್ರಮ ತೆಗೆದುಕೊಳ್ಳಲಾಯಿತು. ಮಹಿಳಾ ಕುಸ್ತಿಪಟುಗಳು ಬ್ರಿಜ್‌ ಭೂಷಣ್‌ ಸಿಂಗ್‌ ನಡೆಸಿದ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದರು ಪ್ರಧಾನಿಗಳ ಕಣ್ಣು ತೆರೆಯಲಿಲ್ಲ. ಈತನ ವಿರುದ್ದ ಕ್ರಮ ತೆಗೆದುಕೊಳ್ಳಲಿಲ್ಲ ಎಂದರು.

ಸ್ಮೃತಿ ಇರಾನಿ ಮೌನವ್ರತ ಆಚರಿಸುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ಮೇಲೆ ನೋಟಿಸ್‌ ಅನ್ನು ವಿರೋಧ ಪಕ್ಷದ ನಾಯಕರಿಗೆ ನೀಡುತ್ತಾರೆ. ಈಗ ಏಕೆ ಸುಮ್ಮನೆ ಕುಳಿತುಕೊಂಡಿದ್ದಾರೆ. ಈಗ ಏಕೆ ನೋಟಿಸ್‌ ನೀಡುತ್ತಿಲ್ಲ. ಮಹಿಳಾ ಆಯೋಗದವರೇ ಮೋದಿ ಅವರಿಗೆ ಪತ್ರ ಬರೆಯಿರಿ, ಓಡಿ ಹೋಗಲು ಸಹಕರಿಸಿದವರಿಗೆ ಪತ್ರ ಬರೆಯಿರಿ. ಜೆ.ಪಿ ನಡ್ಡಾ ಅವರಿಗೆ, ಅಮಿತ್‌ ಶಾ ಅವರಿಗೆ ಧೈರ್ಯ ಇದ್ದರೇ ಪತ್ರ ಬರೆಯಿರಿ. ಇದೇನಾ ನಾರಿಶಕ್ತಿ, ನಾರಿ ವಂದನೆ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದಾಗಿ ವ್ಯಂಗ್ಯವಾಡಿದರು.

ಬೆಂಗಳೂರು: ಸಹಪಾಠಿಯಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ 10ನೇ ತರಗತಿ ವಿದ್ಯಾರ್ಥಿ ಬಂಧನ

ಬೆಂಗಳೂರು: ಸಹಪಾಠಿಯಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ 10ನೇ ತರಗತಿ ವಿದ್ಯಾರ್ಥಿ ಬಂಧನ

Share.
Exit mobile version