ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಭರ್ಜರಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದೀಗ ವಿಶ್ರಾಂತಿಗಾಗಿ ಅವರು ಊಟಿಗೆ ತೆರಳಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಭಾಷಣದಲ್ಲಿ ಹೇಳಿರುವ ಕೆಲವು ಅಂಶಗಳನ್ನು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಹೇಳುತ್ತಿರುವ ಸುಳ್ಳುಗಳ ನೆನಪಾಯಿತು. ಸುಮ್ಮನೆ ಲೆಕ್ಕ ಹಾಕತೊಡಗಿದೆ. ಸದ್ಯಕ್ಕೆ ಇಷ್ಟು ನೆನಪಾಯಿತು. ಹೆಚ್ಚುವರಿಯಾಗಿ ನಿಮಗೆ ನೆನಪಾದರೆ ಇದಕ್ಕೆ ಸೇರಿಸಿಕೊಳ್ಳಿ.ಈ ಸುಳ್ಳುಗಳ ಸರಮಾಲೆ ಇಲ್ಲಿಗೆ ನಿಲ್ಲಲಾರದು, ಮುಂದುವರಿಯಲಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಪ್ರಧಾನಮಂತ್ರಿಯೂ ಇಷ್ಟೊಂದು ನಿರ್ಲಜ್ಜವಾಗಿ ಈ ರೀತಿ ಹಸಿಹಸಿ ಸುಳ್ಳುಗಳನ್ನು ಹೇಳಿರಲಾರರು. ಯಾರೂ ಕೂಡಾ ಪ್ರಧಾನಮಂತ್ರಿ ಕುರ್ಚಿಯ ಘನತೆಯನ್ನು ಈ ರೀತಿ ಮಣ್ಣು ಪಾಲು ಮಾಡಿರಲಾರರು.ಮತದಾನದ ದಿನ ದೇಶದ ಜನರಿಗೆ ಸತ್ಯ-ಸುಳ್ಳುಗಳನ್ನು ಅರಿತುಕೊಳ್ಳುವ ಸದ್ಬುದ್ದಿಯನ್ನು ದೇವರು ಕರುಣಿಸಲಿ ಎಂದು ಬೇಡಿಕೊಳ್ಳುವೆ.

ನರೇಂದ್ರ ಮೋದಿಯವರು ಹೇಳಿದ ಸುಳ್ಳುಗಳು

1) ಎಸ್‌ಸಿ/ಎಸ್‌ಟಿ, ಒಬಿಸಿ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

2) ಸಂಪತ್ತಿನ ಸಮಾನ ಹಂಚಿಕೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂಗಳ ಆಸ್ತಿಯನ್ನು ಕಬಳಿಸಿ ಮುಸ್ಲಿಮರಿಗೆ ನೀಡಲಿದೆ.

3) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಸೇರಿದಂತೆ ಜನರ ಚಿನ್ನ, ಆಸ್ತಿಯನ್ನು ಕಿತ್ತುಕೊಂಡು ಹೆಚ್ಚು ಮಕ್ಕಳು ಇರುವವರಿಗೆ, ನುಸುಳುಕೋರರಿಗೆ (ಮುಸ್ಲಿಮರಿಗೆ) ನೀಡಲಿದೆ.

4) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಬಗ್ಗೆ ಸುಪ್ರಿಂ ಕೋರ್ಟ್‌ ನೀಡಿದ ತೀರ್ಪನ್ನು ಬದಲಾಯಿಸುತ್ತದೆ.

5) ದೇಶದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು.

6) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಗೆ ಶೇ.55ರಷ್ಟು ತೆರಿಗೆ ಹೇರಲಿದೆ.

7) ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ಮೈಸೂರಿನ ದೊರೆಗಳನ್ನು ಕಾಂಗ್ರೆಸ್‌‌ನವರು ನಿಂದಿಸುತ್ತಾರೆ.

8) ಲೋಕಸಭಾ ಚುನಾವಣೆಯನ್ನು ವಿದೇಶಿ ಶಕ್ತಿಗಳು ನಿಯಂತ್ರಿಸುತ್ತಿದೆ.

9) ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಉಗ್ರರಿಗೆ ಪ್ರಧಾನಮಂತ್ರಿಯವರ ನಿವಾಸದಲ್ಲಿ ಸ್ವಾಗತ ಕೋರಲಾಗಿತ್ತು.

10) 2008ರಲ್ಲಿ ಮುಂಬೈ ಪ್ರವೇಶಿಸಿದ ಹತ್ತು ಉಗ್ರರ ಜೊತೆಗೆ ಕಾಂಗ್ರೆಸ್‌ ಸಂಪರ್ಕ ಹೊಂದಿತ್ತು

11) ರಾಜ, ಮಹಾರಾಜರನ್ನು ಟೀಕಿಸುವ ಕಾಂಗ್ರೆಸ್‌ ನವಾಬರನ್ನು ಟೀಕಿಸುವುದಿಲ್ಲ.

12) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಮನೆ ಮನೆಗೂ ದಾಳಿ ನಡೆಸಿ ನೀವು ಕೂಡಿಟ್ಟ ಸಂಪತ್ತನ್ನು ವಶಪಡಿಸಿ, ಅದನ್ನು ತನ್ನ ವೋಟ್ ಬ್ಯಾಂಕ್‌ಗೆ (ಮುಸ್ಲಿಮರಿಗೆ) ಮರು ಹಂಚಿಕೆ ಮಾಡುತ್ತದೆ.

13) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕುತ್ತದೆ.

14) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಬರೀ ಮುಸ್ಲಿಮರೇ ಇರುತ್ತಾರೆ.

15) ಕಳೆದ ಐದು ವರ್ಷಗಳಿಂದ ಅದಾನಿ-ಅಂಬಾನಿಗಳನ್ನು ಪ್ರಶ್ನೆ ಮಾಡುತ್ತಿದ್ದ ರಾಹುಲ್ ಗಾಂಧಿ ಏಕಾಏಕಿ ಪ್ರಶ್ನೆ ಮಾಡುವುದನ್ನು ನಿಲ್ಲಿಸಿದ್ದೇಕೆ? ಹಣ ತುಂಬಿದ ಟೆಂಪೋಗಳು ಕಾಂಗ್ರೆಸ್ ಮನೆಗೆ ತಲುಪಿದೆ.

ಸುಳ್ಳುಗಳು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ರಾಜ್ಯಕ್ಕೆ ಆಗಮಿಸಿ ಭಾಷಣದಲ್ಲಿ ಹೇಳಿರುವಂತಹ ಹಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪ ಮಾಡಿದರು.

Share.
Exit mobile version