ಕೆಎನ್ಎನ್ ಸಿನಿಮಾ ಡೆಸ್ಕ್: ಉತ್ತರ ಕರ್ನಾಟಕದ ಬೀದರ್ ಮತ್ತಿತರ ಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡಾ. ಚನ್ನಬಸವ ಪಟ್ಟದೇವರು ಅವರ ಜೀವನ ಚರಿತ್ರೆಯನ್ನು ಆಧರಿಸಿದ ‘ಕಲ್ಯಾಣ ಕುವರ’ ಸಿನಿಮಾ ತೆರೆಗೆ ಬರುತ್ತಿದೆ. ‘ಭರತ್ ಸಿನಿ ಕ್ರಿಯೇಷನ್ಸ್’ ಬ್ಯಾನರಿನಲ್ಲಿ ವಿಷ್ಣುಕಾಂತ್ ಬಿ. ಜೆ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದಾರೆ.

ವಿಷ್ಣುಕಾಂತ್ ಬಿ. ಜೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಹಿರಿಯ ನಟಿ ಭವ್ಯಾ, ವೈಜನಾಥ್ ಬಿರಾದಾರ್, ಸಂಜು ಬಸಯ್ಯ, ಭರತ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೀದರ್, ಬಾದಾಮಿ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಕರ್ನಾಟಕ ಗಡಿ ಭಾಗದಲ್ಲಿ ಕನ್ನಡ ಉಳಿವಿಗಾಗಿ ನಡೆದ ಹೋರಾಟಗಳ ಚಿತ್ರಣವನ್ನು ಒಂದಷ್ಟು ಧಾರ್ಮಿಕ ವಿಷಯಗಳ ಜೊತೆಗೆ ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಚಿತ್ರತಂಡದ ಮಾತು.

ಸದ್ಯ ‘ಕಲ್ಯಾಣ ಕುವರ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿರುವ ಚಿತ್ರತಂಡ, ಇದೇ ತಿಂಗಳಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ।

Share.
Exit mobile version