ಇರಾನ್ನ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿಧಿವಿಧಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಮಿತಿಯು, ಅವರ ಅಂತಿಮ ಸಂಸ್ಕಾರದ ಮೆರವಣಿಗೆಯು ಜೂನ್ ತಿಂಗಳಲ್ಲಿ ನಡೆಯಬಹುದು ಎಂದು ಸುಳಿವು ನೀಡಿದೆ ಎಂದು ಇರಾನ್ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಖಮೇನಿ ಹತರಾಗಿದ್ದರು. ಅಂದಿನಿಂದ ಟೆಹ್ರಾನ್ ಇನ್ನೂ ತನ್ನ ಮಾಜಿ ಸುಪ್ರೀಂ ಲೀಡರ್ಗೆ ಅಂತಿಮ ಸಂಸ್ಕಾರ ಅಥವಾ ಅಂತ್ಯಕ್ರಿಯೆಯನ್ನು ನೆರವೇರಿಸಿಲ್ಲ.
ಅಮೆರಿಕ-ಇಸ್ರೇಲ್ ದಾಳಿ ಮುಂದುವರಿದಿದ್ದಾಗ, ಏಪ್ರಿಲ್ 8 ರಂದು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತು. ಅದಕ್ಕೂ ಮುನ್ನ, ಮಾರ್ಚ್ ಆರಂಭದಲ್ಲಿ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರು ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇರಾನ್ ಸಂಘಟಕರ ಪ್ರಕಾರ, ಅಲಿ ಖಮೇನಿ ಅವರ ಮೆರವಣಿಗೆಯನ್ನು ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳ 10ನೇ ದಿನದ ನಂತರ ನಡೆಸಬಹುದು. ಬಿಬಿಸಿ ವರದಿಯ ಪ್ರಕಾರ, ಇದು ಜೂನ್ 25 ಅಥವಾ 26 ರಂದು ನಡೆಯುವ ನಿರೀಕ್ಷೆಯಿದೆ.
ಇರಾನ್ ಮಾಧ್ಯಮಗಳ ಹಿಂದಿನ ವರದಿಗಳ ಪ್ರಕಾರ, ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದ ಮೆರವಣಿಗೆಯನ್ನು ಟೆಹ್ರಾನ್, ಪವಿತ್ರ ನಗರವಾದ ಕ್ಯುಮ್ (Qom) ಮತ್ತು ತದನಂತರ ಈಶಾನ್ಯ ಇರಾನ್ನ ಮತ್ತೊಂದು ಪವಿತ್ರ ನಗರವಾದ ಮಶಾದ್ನಲ್ಲಿ ನಡೆಸಲು ನಿಗದಿಪಡಿಸಲಾಗಿದೆ. ಮಶಾದ್ ಖಮೇನಿ ಅವರ ಜನ್ಮಸ್ಥಳವಾಗಿದ್ದು, ಅಲ್ಲಿಯೇ ಅವರನ್ನು ಸಮಾಧಿ ಮಾಡಲಾಗುತ್ತದೆ.
ಯುದ್ಧ ಸಂಬಂಧಿತ ಭದ್ರತಾ ಕಾರಣಗಳಿಂದಾಗಿ ಇರಾನ್ ಅಧಿಕಾರಿಗಳು ಮಾಜಿ ಸುಪ್ರೀಂ ಲೀಡರ್ ಅವರ ಮೆರವಣಿಗೆ ಮತ್ತು ಸಮಾಧಿ ಯೋಜನೆಗಳನ್ನು ಪದೇ ಪದೇ ಮುಂದೂಡಿದ್ದಾರೆ. ಫೆಬ್ರವರಿ 28 ರಂದು ಖಮೇನಿ ಅವರ ಸಂಕೀರ್ಣದ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ನ ಹಲವಾರು ಉನ್ನತ ಮಿಲಿಟರಿ ಕಮಾಂಡರ್ಗಳು ಕೂಡ ಮೃತಪಟ್ಟಿದ್ದರು.
ಅಲಿ ಅವರ ಅಂತ್ಯಕ್ರಿಯೆಯ ಬಗ್ಗೆ ವ್ಯಾಪಕ ಗೊಂದಲಗಳಿರುವ ಹಿನ್ನೆಲೆಯಲ್ಲಿ ಸಮಿತಿಯು ಅಧಿಕೃತ ಹೇಳಿಕೆ ನೀಡಿದೆ. “ಅತ್ಯಂತ ಭವ್ಯವಾದ ಮತ್ತು ಘನತೆಯುಳ್ಳ ವಿದಾಯ, ಅಂತ್ಯಕ್ರಿಯೆ ಮತ್ತು ಸಮಾಧಿಯನ್ನು ನಡೆಸಲು ವ್ಯಾಪಕವಾದ ಯೋಜನೆಗಳ ಅಗತ್ಯವಿದೆ” ಎಂದು ಟೆಹ್ರಾನ್ನ WANA ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ‘ಡಾನ್’ ವರದಿ ಮಾಡಿದೆ.
ಇಸ್ರೇಲ್ ಲೆಬನಾನ್ನ ರಾಜಧಾನಿ ಬೈರುತ್ನಲ್ಲಿ ದಾಳಿ ನಡೆಸಿದ ನಂತರ ಸೋಮವಾರ ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಮತ್ತೆ ಭುಗಿಲೆದ್ದಿತ್ತು. ಇದಕ್ಕೆ ಪ್ರತಿಯಾಗಿ ಟೆಹ್ರಾನ್ ಟೆಲ್ ಅವಿವ್ ಮೇಲೆ ಪ್ರತೀಕಾರದ ದಾಳಿ ನಡೆಸಿತು. ಇಸ್ರೇಲ್ ಇರಾನ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು, ಇದು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಪೂರ್ಣ ಪ್ರಮಾಣದ ಹಗೆತನ ಪ್ರಾರಂಭವಾಗಬಹುದು ಎಂಬ ಭೀತಿಯನ್ನು ಹುಟ್ಟುಹಾಕಿತ್ತು. ಆದರೆ, ಸೋಮವಾರ ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸಿ, ಯುದ್ಧನಿರತ ಎರಡೂ ರಾಷ್ಟ್ರಗಳಿಗೆ “ತಕ್ಷಣವೇ ಗುಂಡಿನ ದಾಳಿ ನಿಲ್ಲಿಸಿ” ಮತ್ತು “ಕದನ ವಿರಾಮಕ್ಕಾಗಿ ನೋಡಿ” ಎಂದು ಕರೆ ನೀಡಿದ ನಂತರ ಪರಿಸ್ಥಿತಿ ತಣ್ಣಗಾಗಿದೆ.








