ಬೆಂಗಳೂರು : ತೀವ್ರ ಶಾಖದ ಅಲೆ , ಅತಿಯಾದ ಉಷ್ಣಾಂಶದಿoದಾಗಿ ವಿವಿಧ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇದ್ದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅನಾರೋಗ್ಯ ಪರಿಸ್ಥಿತಿಗಳನ್ನು ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆಗಳನ್ನು ಪಾಲಿಸಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಈ ಕುರಿತು ಪ್ರಕಟಣೆ ನೀಡಲಾಗಿದ್ದು, ಹವಾಮಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಬಿಸಿ ಗಾಳಿ, ಅತೀಯಾದ ಉಷ್ಣಾಂಶ ಹೆಚ್ಚುತ್ತಿದೆ. ವೃದ್ದರು, ಮಕ್ಕಳು, ಅನಾರೋಗ್ಯಪಿಡೀತರು, ಗರ್ಭಿಣೀಯರು ಮತ್ತು ಹಸುಗೂಸು, ಬಾಣಂತಿಯರು ಬಿಸಿಲ ಸಮಸ್ಯೆಯಿಂದ ದೂರವಿರಲು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ.

ಹೆಚ್ಚು ನೀರು ಕುಡಿಯುವುದು: ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರನ್ನು ಕುಡಿಯಬೇಕು. ಬಾಯಾರಿಕೆಯು ನಿರ್ಜಲೀಕರಣದ ಪ್ರಮುಖ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಂದರ್ಭದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಪುನರ್ಜಿಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ಲಿಂಬು ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸಬೇಕು. ಈ ಋತುವಿನಲ್ಲಿ ಸಿಗುವ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳಾದ ಕಲ್ಲಂಗಡಿ, ಕರಬೂಜ, ಮೂಸಂಬಿ, ದ್ರಾಕ್ಷಿ, ಅನಾನಸ್ ,ತರಕಾರಿಗಳಾದ ಸೌತೆಕಾಯಿ ಹಾಗೂ ಸ್ಥಳೀಯವಾಗಿ ಸಿಗುವ ಇತರೆ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಎಳನೀರನ್ನು ಸೇವಿಸಬೇಕು ಎಂದು ಅವರು ತಿಳಿಸಿದ್ದಾರೆ

ಸೂಕ್ತ ಉಡುಪನ್ನು ಧರಿಸುವುದು: ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ನಡೆಯುವಾಗ ಸೂರ್ಯನ ನೇರ ಕಿರಣಗಳಿಂದ ರಕ್ಷಣೆ ಪಡೆಯಲು ತಲೆಯನ್ನು ಮುಚ್ಚುವಂತಹ ಟೋಪಿ, ಛತ್ರಿ ಹಾಗೂ ಸಾಂಪ್ರದಾಯಿಕವಾಗಿ ಬಳಸುವ ಟವೆಲ್ ಅನ್ನು ಬಳಸಬೇಕು. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ, ಶೂಗಳನ್ನು ಧರಿಸಬೇಕು ಎಂದು ತಿಳಿಸಿದ್ದಾರೆ.

ಸಾಧ್ಯವಾದಷ್ಟು ಒಳಾಂಗಣದಲ್ಲೇ ಇರಬೇಕು: ಉತ್ತಮ ಗಾಳಿ ಇರುವ ಹಾಗೂ ತಂಪಾಗಿರುವ ಪ್ರದೇಶದಲ್ಲಿರಬೇಕು. ಸೂರ್ಯನ ಶಾಖ ಹಾಗೂ ಬಿಸಿಗಾಳಿಯು ಹಗಲು ಹೊತ್ತಿನಲ್ಲಿ ನೇರವಾಗಿ ಮನೆಯ ಒಳಗಡೆ ಪ್ರವೇಶವಾಗದಂತೆ ಮನೆಯ ಕಿಟಕಿ ಹಾಗೂ ಕರ್ಟನ್‌ಗಳನ್ನು ಮುಚ್ಚಬೇಕು. ಹಾಗೂ ರಾತ್ರಿಯ ಸಮಯದಲ್ಲಿ ತಂಪಾದ ಗಾಳಿಯ ಸಂಚಾರಕ್ಕೆ ಕಿಟಕಿಗಳನ್ನು ತೆರೆದಿಡಬೇಕು. ಹೊರಗಡೆ ಹೋಗುವ ಪ್ರಸಂಗ ಬಂದರೆ ನಿಮ್ಮ ಚಟುವಟಿಕೆಗಳನ್ನು ಆದಷ್ಟು ಬೆಳಿಗ್ಗೆ ಹಾಗೂ ಸಾಯಂಕಾಲದ ತಂಪಾದ ಸಮಯದಲ್ಲಿ ಹಮ್ಮಿಕೊಳ್ಳಬೇಕು.

ದುರ್ಬಲ ವ್ಯಕ್ತಿಗಳಿಗೆ: ಯಾವುದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಿಸಿಗಾಳಿಯ ಒತ್ತಡ ಹಾಗೂ ಅತಿಯಾದ ಉಷ್ಣಾಂಶದಿoದಾಗಿ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದರೆ ದುರ್ಬಲ ಆರೋಗ್ಯದ ಜನರಿಗೆ ಬೇರೆಯವರಿಗಿಂತ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರು ಹೆಚ್ಚುವರಿ ಗಮನ ನೀಡುವುದು ಅವಶ್ಯಕವಾಗಿರುತ್ತದೆ. ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ಅದರಲ್ಲೂ ಹೃದಯರೋಗ ಮತ್ತು ಅಧಿಕ ರಕ್ತದ ಒತ್ತಡ ಇರುವವರು, ತಂಪಾದ ವಾತಾವರಣ ಪ್ರದೇಶದಿಂದ ಅತಿಯಾದ ಉಷ್ಣಾಂಶವಿರುವ ಪ್ರದೇಶಕ್ಕೆ ಭೇಟಿ ನೀಡುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.

ಇತರೆ ಮುನ್ನೆಚ್ಚರಿಕೆ ಕ್ರಮಗಳು: ಏಕಾಂಗಿಯಾಗಿ ವಾಸಿಸುವ ಹಿರಿಯ ವೃದ್ದರು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪ್ರತಿನಿತ್ಯ ಮೇಲುಸ್ತುವಾರಿ ಮಾಡಬೇಕು. ಮನೆಯ ಒಳಾಂಗಣವನ್ನು ತಂಪಾಗಿರುವಂತೆ ನೋಡಿಕೊಳ್ಳುವುದು ಹಾಗೂ ರಾತ್ರಿ ಸಮಯದಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಅಂತಸ್ತುಗಳಲ್ಲಿ ಇರುವುದು ಉತ್ತಮ. ಫ್ಯಾನ್ ಅಥವಾ ತೇವವಾದ ಬಟ್ಟೆಗಳನ್ನು ಬಳಸಿ ದೇಹವನ್ನು ತಂಪಾಗಿಡಬೇಕು.

ಅತಿಯಾದ ಬಿಲಿಸಿನ ತಾಪಮಾನದಲ್ಲಿ ಸಾರ್ವಜನಿಕರು ಏನು ಮಾಡಬಾರದು: ಬಿಸಿಲಿನ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನ 12.00 ರಿಂದ 3.00 ರವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಹೊರಾಂಗಣದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಪಾದರಕ್ಷೆಗಳನ್ನು ಧರಿಸದೇ ಹೊರಗಡೆ ಹೋಗಬಾರದು. ಅಧಿಕ ಬಿಸಿಲಿರುವ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕು. ಉತ್ತಮ ಗಾಳಿ ಪ್ರಸಾರವಾಗಿ ತಂಪಾಗಿರುವoತೆ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು. ಮದ್ಯಪಾನ (ಆಲ್ಕೋಹಾಲ್), ಟೀ, ಕಾಫಿ ಮತ್ತು ಕಾರ್ಭೋನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇವು ದೇಹವನ್ನು ನಿರ್ಜಲೀಕರಣ ಹಾಗೂ ಹೊಟ್ಟೆ ನೋವನ್ನು ಉಂಟು ಮಾಡುತ್ತವೆ. ಚಿಕ್ಕ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿಯಾಗಬಹುದು.

ತೀವ್ರ ಶಾಖದ ಅಲೆ, ಅತಿಯಾದ ಉಷ್ಣಾಂಶದಿoದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿಗಳನ್ನು ತಡೆಗಟ್ಟಲು, ಸಾರ್ವಜನಿಕರು ತಪ್ಪದೇ ಮೇಲಿನ ಕ್ರಮಗಳನ್ನು ಅನುಸರಿಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version