ಕೊಪ್ಪಳ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ ಆರ್ ಪಿ ಪಿ ಪಕ್ಷ ಸ್ಥಾಪನೆ ಮಾಡಿ, ಇದೀಗ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಜನಾರ್ಧನ ರೆಡ್ಡಿ ಅವರು ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದು, ನಾನು ಗಂಗಾವತಿಯ ಕ್ಷೇತ್ರದ ಶಾಸಕನಾಗಲು ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಶಾಸಕ ಜನಾರ್ದನ ರೆಡ್ಡಿ ಅಚ್ಚರಿಯ ಹೇಳಿಕೆಯನ್ನು ನೀಡಿದರು.

ನಗರದ ಕನಕಗಿರಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಚುನವಾಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಕ್ಬಾಲ್ ಅನ್ಸಾರಿ ಅವರು ಸೋಲಿನ ಹತಾಶೆಯಿಂದ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರನ್ನು ರೆಡ್ಡಿ ಬುಕ್ ಮಾಡಿಕೊಂಡಿದ್ದಾರೆ ಎಂದು ಭಾಷಣದಲ್ಲಿ ಮಾತನಾಡುತ್ತಿದ್ದಾರೆ.

ಆದರೆ ಅವರಿಗೆ ಅಸಲಿ ವಿಷಯ ಗೊತ್ತಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನಗೆ ಬೆಂಬಲಿಸಿದ್ದಾರೆ.ಆ ಕಾರಣದಿಂದಲೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅನ್ಸಾರಿ ಆಯೋಜಿಸಿದ್ದ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿಲ್ಲ. ಇದು ಎಲ್ಲರಿಗೂ ಗೊತ್ತಿದ್ದ ವಿಷಯ. ನಾನು ಗೆದ್ದರೆ 10 ಶಾಸಕರು ತಮಗೆ ಬೆಂಬಲ ವ್ಯಕ್ತ ಪಡಿಸುತ್ತಾರೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ನನ್ನ ಗೆಲುವಿಗೆ ಬೆಂಬಲಿಸಿದ್ದಾರೆ ಎಂದರು.

Share.
Exit mobile version