ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೊಳುವಾರಿನಲ್ಲಿರುವ ಪ್ರಸಿದ್ಧ ಸುಧಾನ ಶಾಲೆಯ ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಸುಧಾನ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಮನೋಹರ್ ರೈ ಅವರ ಪುತ್ರ ಸುಶಾನ್ ರೈ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಬಹುಮಹಡಿ ಕಟ್ಟಡದಿಂದ ಬಿದ್ದಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.
ಸುಶಾನ್ ರೈ ಅವರು ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಯಕ್ಕೆ ತೆರಳಿದ್ದರು. ಕೆಲ ಸಮಯದ ವೇಳೆ ಅವರು ಸಮುಚ್ಚಯದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ನಡೆದ ತಕ್ಷಣ ಅಲ್ಲಿದ್ದ ಸ್ಥಳೀಯರು ಸೇರಿ ಆತನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ತಂದೆ ಮನೋಹರ್ ರೈ, ತಾಯಿ ಸುಧಾ ಎಂ. ರೈ ಮತ್ತು ಸಹೋದರ ಸೋಹನ್ ರೈ ಅವರನ್ನು ಅಗಲಿದ್ದಾರೆ.
ವಸತಿ ಸಮುಚ್ಚಯದ ಕಟ್ಟಡದಲ್ಲಿ ಶಾಲಾ ಬ್ಯಾಗ್ ಪತ್ತೆ
ಸುಶಾನ್ ರೈ ಅವರು ಶಾಲೆಯಿಂದ ನೇರ ಮನೆಗೆ ಹೋಗದೆ ವಸತಿ ಸಮುಚ್ಚಯಕ್ಕೆ ಸಂಜೆ 4.20ರ ಸುಮಾರಿಗೆ ಒಳಗೆ ಬಂದಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಆ ಬಳಿಕ ಕೆಲವೇ ನಿಮಿಷದಲ್ಲಿ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಯಾವತ್ತೂ ಅಪಾರ್ಟ್ ಮೆಂಟ್ ಗೆ ತೆರಳದ ಬಾಲಕ ಘಟನೆ ನಡೆದ ದಿನ ಯಾವ ಕಾರಣಕ್ಕೆ ಹೋಗಿದ್ದಾನೆ ಎಂದು ತಿಳಿದುಬಂದಿಲ್ಲ. ಆತನ ಶಾಲಾ ಬ್ಯಾಗ್ ಮಾತ್ರ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.