ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ (ಅ. 5 ರಂದು) ಹೆದ್ದಾರಿ ಬಂದ್ಗೆ ರೈತ ಸಂಘಟನೆ ಕರೆ ನೀಡಿದೆ.
ಮಂಡ್ಯ, ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರಿನ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ರೈತ ಸಂಘಟನೆ ಕರೆ ನೀಡಿದೆ.
ಈ ಹಿನ್ನೆಲೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ‘ ರೈತರು ನನಗೆ 10 ದಿನಗಳ ಕಾಲಾವಕಾಶ ನೀಡಿದ್ರೆ,ಅಷ್ಟರೊಳಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುತ್ತೇನೆ, ನಿಮ್ಮ ವಿವಿಧ ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ರೈತರ ಬೇಡಿಕೆಗೆ ಸಿಎಂ ಸ್ಪಂದಿಸುತ್ತಾರೆ, ವಿಜಯದಶಮಿ ದಿನದಂದು ರಸ್ತೆ ತಡೆ ಮಾಡದಂತೆ ಮನವಿ ಮಾಡಿದ್ದೇನೆ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದರು.
ಟ್ರ್ಯಾಕ್ಟರ್, ಎತ್ತಿನಗಾಡಿಗಳ ಮೂಲಕ ಹೆದ್ದಾರಿ ತಡೆಯಲಾಗುವುದು. ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು, ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ ದಸರಾ ಹಬ್ಬದ ದಿನ ಅ. 5 ರಂದು ಹೆದ್ದಾರಿ ಬಂದ್ಗೆ ರೈತ ಸಂಘಟನೆ ಕರೆ ನೀಡಿದೆ ಎಂದು ಮಂಡ್ಯದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಪ್ರತಿ ಲೀಟರ್ ಹಾಲಿಗೆ 40 ರೂ. ನೀಡಬೇಕು. ಟನ್ ಕಬ್ಬಿಗೆ 4,500 ರೂ. ನಿಗಧಿಯಾಗಬೇಕು ವಿದ್ಯುತ್ ಬಾಕಿ ದರ ಮನ್ನಾ ಮಾಡಬೇಕು. . ಇದನ್ನ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.