ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಮಾಜಿ ಐಎಎಸ್ ಅಧಿಕಾರಿ, ನಟ ಶಿವರಾಮ್ ಅವರು ನಿನ್ನೆ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಇಂದು ಅವರ ಹುಟ್ಟೂರು ಉರಗಹಳ್ಳಿ ಬಳಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಾಮನಗರ ತಾಲೂಕಿನ ಬಿಡದಿ ಬಳಿಯ ಉರಗಹಳ್ಳಿಯಲ್ಲಿ ಛಲವಾದಿ ಮಹಾಸಭಾದ ಸ್ವಾಮೀಜಿಯ ನೇತೃತ್ವದಲ್ಲಿ ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ವಿಧಿ ವಿಧಾನವನ್ನು ಶಿವರಾಮ್ ಅಳಿಯ ನಟ ಪ್ರದೀಪ್ ಅವರು ನೆರವೇರಿಸಿದರು.

ಡಿಸಿ ಅವಿನಾಶ್ ಮೆನನ್ ರಾಜೇಂದ್ರ, ಎಸ್ಪಿ ಸೇರಿದಂತೆ ಹಲವರು ಅಂತ್ಯಕ್ರಿಯೆ ವೇಳೆಯಲ್ಲಿ ನೆರೆದಿದ್ದರು. ಅಗಲಿದ ನಾಯಕನಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದರು.

ನಟ ಕೆ.ಶಿವರಾಮ್ ಪರಿಚಯ

ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಏಪ್ರಿಲ್ 6, 1953 ರಂದು ಜನಸಿದ ಕೆ. ಶಿವರಾಮು 1985 ರಲ್ಲಿ ಕೆಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಆ ಬಳಿಕ ಕನ್ನಡ ಭಾಷೆಯಲ್ಲಿ ಐಎಎಸ್‌ ಪರೀಕ್ಷೆ ಬರೆದು, ತೇರ್ಗಡೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1993 ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕೆ.ಶಿವರಾಮ್ ಪ್ರವೇಶಿಸಿದ್ದರು.  ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಕೆ.ಶಿವರಾಮ್ ಅಭಿನಯಿಸಿದ್ದಾರೆ.

ರಾಜಕೀಯಕ್ಕೂ ಧುಮುಕ್ಕಿದ್ದ ಶಿವರಾಮ್

2013 ರಲ್ಲಿ ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ಕೆ.ಶಿವರಾಮ್, 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು. ಇಂತಹ ಅವರು ಇಂದು ಮಣ್ಣಲ್ಲಿ ಮಣ್ಣಾಗುವ ಮೂಲಕ ಇನ್ನೂ ನೆನಪು ಮಾತ್ರವಾಗಿದ್ದಾರೆ.

ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಪ್ರಥಮ ಅಧಿವೇಶನ ‘ಇಲಾಖಾ ಪರೀಕ್ಷೆ’ಗೆ ಅರ್ಜಿ ಆಹ್ವಾನ

Share.
Exit mobile version