ಬೆಂಗಳೂರು: ಕೆಎಸ್ ಆರ್ ಟಿ ಸಿ ಬಸ್ಸಿನ ಅಪಘಾತದಲ್ಲಿ‌ ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ಮೊದಲ ಬಾರಿಗೆ ರೂ.10 ಲಕ್ಷ ಅಪಘಾತ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ನಿಗಮವು, ಇಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ  ಅವರು ಹಾಗೂ ಅಧ್ಯಕ್ಷರು ಕ ರಾ ರ ಸಾ ನಿಗಮ ಎಸ್ ಆರ್ ಶ್ರೀನಿವಾಸ್(ವಾಸು) ಅವರು, ನಿಗಮದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಅವಲಂಬಿತರಿಗೆ ರೂ 10 ಲಕ್ಷ ಅಪಘಾತ ಪರಿಹಾರದ ಚೆಕ್ ಅನ್ನು ವಿತರಿಸಿದರು ಎಂದು ತಿಳಿಸಿದೆ.

ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿನ ಅಪಘಾತದಲ್ಲಿ ಮೃತಪಟ್ಟಲ್ಲಿ ಪ್ರಯಾಣಿಕರ ಅವಲಂಬಿತರಿಗೆ ಈ ಹಿಂದೆ ರೂ. 3 ಲಕ್ಷ ಪರಿಹಾರ ಚೆಕ್ ಅನ್ನು ನೀಡಲಾಗುತ್ತಿತ್ತು. ಅವಲಂಭಿತರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ದಿನಾಂಕ 01/01/2024 ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು ರೂ. 10 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದೆ ಎಂದು ಹೇಳಿದೆ.

ಅದರಂತೆ, ದಿನಾಂಕ: 04/02/2024 ರಂದು ಹಾಸನ ವಿಭಾಗದ,ಚನ್ನರಾಯಪಟ್ಟಣ ಘಟಕದ ವಾಹನ ಸಂಖ್ಯೆ ಕೆಎ-13-ಎಫ್-2261 ಬೆಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವಾಗ ಸಕಲೇಶಪುರದ ಸಮೀಪ ಬಾಗೆ ಎಂಬ ಸ್ಥಳದ ತಿರುವಿನಲ್ಲಿ ಅಪಘಾತಕ್ಕೆ ಒಳಪಟ್ಟು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಜಿ.ಎನ್ ಅಮೃತ್, 34 ವರ್ಷರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಮೃತರ ತಂದೆಯಾದ ಜಿ.ಡಿ ನಾಗರಾಜುರವರಿಗೆ ಇಂದು ರೂ 10 ಲಕ್ಷಗಳ ಅಪಘಾತ ಪರಿಹಾರದ ಚೆಕ್ ಅನ್ನು ವಿತರಿಸಿ ಸಾಂತ್ವನ ಹೇಳಲಾಯಿತು.

ಈ ವೇಳೆ ಮಾತನಾಡಿದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಅಪಘಾತಗಳು ಆಕಸ್ಮಿಕವೇ ಆದರೂ ಅದರಿಂದಾಗುವ ಪ್ರಾಣ ಹಾನಿ ಮತ್ತು ಕುಟುಂಬಕ್ಕೆ ಉಂಟಾಗುವ ನಷ್ಟವನ್ನು ಭರಿಸಲು ಅಸಾಧ್ಯ. ಆದರೂ ನಿಗಮವು ಪ್ರಯಾಣಿಕರೆಡೆಗಿನ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾತ್ರಿ ಪಾಳಿಯ ಬಸ್ಸುಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರಿಗೆ ಫ್ಲಾಸ್ಕ್ ( ಕಾಪಿ/ಟೀ/ಬಿಸಿನೀರು ಕುಡಿಯಲು ಅನುವಾಗುವಂತೆ) ನೀಡಲಾಗಿದೆ ಎಂದು ತಿಳಿಸಿ ಆ ದೇವರು ತಮ್ಮ‌ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.

KSRTC ಅಧ್ಯಕ್ಷರಾದಂತ ಎಸ್ ಆರ್ ಶ್ರೀನಿವಾಸ್(ವಾಸು) ಮಾತನಾಡಿ, ಅಪಘಾತಗಳನ್ನು ತಡೆಗಟ್ಟಲು ಸಂಸ್ಥೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ವಿ.ಅನ್ಬುಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕ ರಾ ರ ಸಾ ನಿಗಮ, ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತೆ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯವು ಈಗ ಪಾಕಿಸ್ತಾನದ ‘ಸಂಪೂರ್ಣ ಆರ್ಥಿಕತೆಗಿಂತ’ ಹೆಚ್ಚು

BIGG NEWS: ನಾಮಫಲಕ ವಿವಾದ: ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ!?

Share.
Exit mobile version