ಬಳ್ಳಾರಿ : ಸಿಎಂ ಹಾಗೂ ಡಿಸಿಎಂ ವಿಚಾರವಾಗಿ ಯಾರೂ ಬಾಯಿ ಬಿಡಬಾರದು. ಒಂದು ವೇಳೆ ಬಹಿರಂಗ ಹೇಳಿಕೆ ನೀಡಿದರೆ ನೋಟಿಸ್ ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹಾಗೂ ಸಚಿವರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇದೀಗ ಶಾಸಕ ಶಿವಗಂಗಾ ಬಸವರಾಜು ಡಿಕೆ ಶಿವಕುಮಾರ್ ಅವರು ಸಿಎಂ ಆಗಲೇಬೇಕು ಹಾಗೆ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 9 ಸ್ಥಾನ ಬರಲು ಡಿಕೆ ಶಿವಕುಮಾರ್ ಅವರೇ ಕಾರಣರಾಗಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಬಳಿಕ ಡಜನ್ಗಟ್ಟಲೆ ಡಿಸಿಎಂ ಮಾಡಲಿ ಬೇಡ ಅನೋದಿಲ್ಲ. ಕೆಲ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಿಎಂ ಮಾಡಿದೆ. ಡಿಸಿಎಂ ಹುದ್ದೆ ಬೇಕೆಂದವರು ಹೈಕಮಾಂಡ್ ಬಳಿ ತೆರಳಿ ಚರ್ಚಿಸಬೇಕು ಎಂದರು.

ಸಿಎಂ ಡಿಸಿಎಂ ವಿಚಾರವಾಗಿ ಅಧ್ಯಕ್ಷರು ಎಚ್ಚರಿಕೆ ಸಂದೇಶ ನೀಡಿದರು ಮತ್ತೆ ಮಾತನಾಡುತ್ತಿದ್ದಾರೆ.ಪಕ್ಷ ಕಷ್ಟದ ಕಾಲದಲ್ಲಿದ್ದಾಗ ಸಚಿವ ಕೆ ಎನ್ ರಾಜಣ್ಣ ಮಾತನಾಡಲಿಲ್ಲ.ಆಗ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸಿದ್ದು ಡಿಕೆ ಶಿವಕುಮಾರ್.ಡಿಕೆ ಸಿಎಂ ಆಗಬೇಕು ಅಂತ ಸ್ವಾಮೀಜಿ ಅವರು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ.ಜನರ ಭಾವನೆ ಭಕ್ತರ ಆಶಯವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಕೊಟ್ಟೂರಿನಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಹೇಳಿಕೆ ನೀಡಿದರು.

Share.
Exit mobile version