ಬೆಂಗಳೂರು: ಕಾಂಗ್ರೆಸ್ ದೇಶದ್ರೋಹಿಗಳ ಮತ್ತು ಭ್ರಷ್ಟಾಚಾರಿಗಳ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಲೋಕಾಯುಕ್ತಕ್ಕೆ ದಾಖಲೆ ಕೊಡಲಿ. ಪೊಲೀಸರಿಗೆ ಕೊಡಬಹುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಆದರೂ ಕೂಡ ಸಾಕ್ಷ್ಯಾಧಾರ ಇಲ್ಲದ ಕಾರಣ ದೂರು ಸಲ್ಲಿಸಲು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೀದಿಯಲ್ಲಿ ಹೋಗುವ ರಾಮಣ್ಣ, ಸೋಮಣ್ಣನ ಹಾಗೆ ಕಬ್ಬಿಣದ ಕಾಲಿನ ರಾಹುಲಣ್ಣನೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಹೆಸರಾಂತ ಪ್ರಧಾನಮಂತ್ರಿಗಳ ಕುಟುಂಬ ಹಾಗೂ ಹೆಸರಾಂತ ಗಾಂಧಿ ಕುಟುಂಬದಿಂದ ಬಂದ ಅವರಿಗೆ ಇಷ್ಟೊಂದು ಕನಿಷ್ಠ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದರಲ್ಲದೆ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.

Share.
Exit mobile version