ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ದಿನಾಂಕ 20.05.2026 ರಿಂದ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನಿಗಮವು ಖಡಕ್ ಎಚ್ಚರಿಕೆ ನೀಡಿದೆ. ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ (No Work No Pay)” ತತ್ವದಡಿ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಅಗತ್ಯ ಸೇವೆಗಳ ಕಾಯ್ದೆ ಜಾರಿ: ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ. ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಅಗತ್ಯ ಸೇವೆಗಳ ಕಾಯ್ದೆ (Karnataka Act No-25/2015) ಅಡಿ ತಂದಿರುವುದರಿಂದ ನೌಕರರು ಮುಷ್ಕರ ಹೂಡುವಂತಿಲ್ಲ ಹಾಗೂ ಯಾರೂ ಇದಕ್ಕೆ ಪ್ರಚೋದನೆ ನೀಡುವಂತಿಲ್ಲ.
ಸಾರ್ವಜನಿಕ ಉಪಯುಕ್ತ ಸೇವೆ: ಸರ್ಕಾರವು ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂದು ಘೋಷಿಸಿದೆ. ಸದ್ಯ ಮುಷ್ಕರದ ನೋಟಿಸ್ ಕುರಿತಾದ ವಿವಾದವು ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿರುವುದರಿಂದ, ನಿಯಮಗಳ ಪ್ರಕಾರ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರ ಮಾಡುವಂತಿಲ್ಲ.
ನಿಗಮದ ಮುಂಜಾಗ್ರತಾ ಕ್ರಮಗಳು ಮತ್ತು ಕಟ್ಟುನಿಟ್ಟಿನ ನಿರ್ದೇಶನಗಳು:
ದಿನಾಂಕ 20.05.2026 ರಿಂದ ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ತಡೆಯಲು ನಿಗಮವು ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:
ರಜೆಗಳ ರದ್ದು: ಮೇ 20 ರಿಂದ ಜಾರಿಗೆ ಬರುವಂತೆ ಅತ್ಯಂತ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು. ಅವಶ್ಯಕತೆ ಬಿದ್ದಲ್ಲಿ ವಾರದ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬಹುದು.
ವೇತನ ಕಡಿತ ಮತ್ತು ಶಿಸ್ತು ಕ್ರಮ: ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರುಹಾಜರಾಗುವ ನೌಕರರ ದಿನವಹಿ/ಘಟಕವಾರು ಪಟ್ಟಿಯನ್ನು ಸಿದ್ಧಪಡಿಸಿ, ಅಂದಿನ ವೇತನವನ್ನು ಕಡಿತಗೊಳಿಸಲಾಗುವುದು.
ನ್ಯಾಯಾಲಯದ ಆದೇಶದ ಅನ್ವಯ ಕ್ರಮ: ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ಆದೇಶದ ಅನ್ವಯ (Writ Appeal No.6347 of 2000), ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವೇತನ ಕಡಿತದ ಜೊತೆಗೆ ಅವರ ವಿರುದ್ಧ ಇಲಾಖಾ ಶಿಸ್ತಿನ ಕ್ರಮ ಜರುಗಿಸಲು ಆಡಳಿತ ಮಂಡಳಿಗೆ ಪೂರ್ಣ ಅಧಿಕಾರವಿರುತ್ತದೆ.
ರಾಜ್ಯದ ಜನಸಾಮಾನ್ಯರ ಹಿತದೃಷ್ಟಿಯಿಂದ ನೌಕರರು ಯಾವುದೇ ಕಾರಣಕ್ಕೂ ಮುಷ್ಕರದಲ್ಲಿ ಭಾಗವಹಿಸದೆ, ತಮ್ಮ ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕಾಗಿ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.









