ಬೆಂಗಳೂರು: ಇಂದು ಜನವರಿ 26, 2023ರಂದು 74 ನೇ ಗಣರಾಜ್ಯೋತ್ಸವ ದಿನಾಚರಣೆ. ಈ ಸಂದರ್ಭದಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ಹೇಗೆ ನಡೆಸಬೇಕು.? ಯಾರು ಧ್ವಜಾರೋಹಣ ಮಾಡಬೇಕು ಎಂಬುದಾಗಿ ಸರ್ಕಾರ ಸುತ್ತೋಲೆಯಲ್ಲಿ ವಿವರವಾಗಿ ಮಾಹಿತಿ ನೀಡಿದೆ. ಆ ಮಾಹಿತಿ ಮುಂದಿದೆ ಓದಿ.
ರಾಷ್ಟ್ರೀಯ ಹಬ್ಬಗಳಂದು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ಹೇಗೆ ನೆರವೇರಿಸಬೇಕು ಎನ್ನುವ ಬಗ್ಗೆ ದಿನಾಂಕ 28-07-2009ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆ ಸುತ್ತೋಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ, ಭಾವೈಕ್ಯತೆ ಹಾಗೂ ಪರಸ್ಪರ ಸಹಬಾಳ್ವೆ ಬಗ್ಗೆ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು, ರಾಷ್ಟ್ರ ಲಾಂಛನವಾದ ತ್ರಿವರ್ಣ ಧ್ವಜವನ್ನು ಗೌರವಯುತವಾಗಿ ನಿಗದಿತ ಸಮಯದೊಳಗೆ ಅರೋಹಣ ಮಾಡಿ, ನಂತ್ರ ಅದನ್ನು ಜೋಪಾನವಾಗಿ ಇಳಿಸಿ, ಸಂರಕ್ಷಿಸಬೇಕು ಎಂದಿದೆ.
ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಾದ 15ನೇ ಆಗಸ್ಟ್ ಮತ್ತು ಜನವರಿ 26ರಂದು ಅನುಕ್ರಮವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ. ಈ ಸಂಬಂಧ ಎಲ್ಲಾ ಶಾಲಾ-ಕಾಲೇಜುಗಳು, ಪದವಿ ಪೂರ್ವ ಕಾಲೇಜುಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸುವ ಬಗ್ಗೆ ಈ ಕೆಳಕಂಡ ಸೂಚನೆ ಪಾಲಿಸುವಂತೆ ತಿಳಿಸಿದೆ.
- ಯಾವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಆಡಳಿತ ಸಮಿತಿ ( ಎಸ್ ಡಿ ಎಂ ಸಿ) ಅಸ್ತಿತ್ವದಲ್ಲಿರುತ್ತದೆಯೋ, ಅಂತಹ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷರು ನಿಗಗಿತ ಸಮಯದೊಳಗೆ ನೆರವೇರಿಸತಕ್ಕದ್ದು ಎಂದಿದೆ.
- ಎಸ್ ಡಿ ಎಂ ಸಿ ಅಸ್ತಿತ್ವದಲ್ಲಿಲ್ಲದೇ ಇದ್ದರೇ, ಅಧ್ಯಕ್ಷರ ಅನುಪಸ್ಥಿತಿ ಇದ್ದರೇ ಅಂತಹ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೆರವೇರಿಸಬೇಕು.
- ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಬಂಧಿಸಿದ ಪ್ರಾಂಶುಪಾಲರು ನೆರವೇರಿಸುವುದು.
ರಾಷ್ಟ್ರೀಯ ಹಬ್ಬಗಳಂದು ಎಲ್ಲಾ ಶಾಲೆಗಳ ಕಟ್ಟಡಗಳ ಮೇಲೆ ಧ್ವಜಾರೋಹಣ ನೆರವೇರಿಸುವ ವಿಧಾನ
ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಾದ 15ನೇ ಆಗಸ್ಟ್ ಮತ್ತು ಜನವರಿ 26ರಂದು ಅನುಕ್ರಮವಾಗಿ ಸ್ವಾತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಈ ವೇಳೆ ಧ್ವಜಾರೋಹಣ ಸಂದರ್ಭದಲ್ಲಿ ಈ ಕೆಳಗಿನ ನಿಯಮ ಪಾಲಿಸುವಂತೆ ತಿಳಿಸಿದೆ.
- ರಾಷ್ಟ್ರೀಯ ತ್ರಿವರ್ಣ ಧ್ವಜವು ಹರಿದಿರಬಾರದು
- ತಳೆ ಕೆಳಗಾಗಿ ಧ್ವಜವನ್ನು ಹಾರಿಸಬಾರದು
- ನಿಗಧಿತ ಸಮಯದಲ್ಲಿ ಧ್ವಜಾರೋಹಣ ಮತ್ತು ಇಳಿಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.