ಬಳ್ಳಾರಿ : ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ 08ಕೋಟಿ‌ ರೂ. ಮೌಲ್ಯದ ಹಾಸ್ಟೆಲ್‌ ನಿರ್ಮಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಉದಾರ ಮನಸ್ಸಿನಿಂದ ದಾನ ನೀಡುವ ಮೂಲಕ ಇಲ್ಲೊಬ್ಬ ವ್ಯಕ್ತಿ‌ ಗಮನ ಸೆಳೆದಿದ್ದಾನೆ.

ಅವರೇ ಟಪಾಲ್‌ ಭವಾನಿ ಪ್ರಸಾದ್. ಬಳ್ಳಾರಿ ನಿವಾಸಿಗಳಾದ ದಿವಂಗತ ಟಪಾಲ್ ಅಂಜಿನಮ್ಮ ಮತ್ತು ದಿವಂಗತ ಟಪಾಲ್ ತಿಮ್ಮಪ್ಪ ಅವರ ಮಗನಾದ ಟಪಾಲ್‌ ಭವಾನಿ ಪ್ರಸಾದ್ ಅವರು ಬಳ್ಳಾರಿಯ ನಾಗಲಚೆರವು ಪ್ರದೇಶದಲ್ಲಿರುವ ಅತ್ಯಂತ ‌ಬೆಲೆಬಾಳುವ 18725 ಚ.ಅಡಿ ನಿವೇಶನದಲ್ಲಿ ಸುಸಜ್ಜಿತವಾದ ವಸತಿ ನಿಲಯವನ್ನು 4.50ಕೋಟಿ‌ ರೂ.ಗಳ‌ ವೆಚ್ಚದಲ್ಲಿ ಖರ್ಚು ಮಾಡಿ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ‌ ನಿರ್ಮಾಣ ಮಾಡಿದ್ದು, ಅವರ ಉದಾರವಾದ ಮನಸ್ಸಿನಿಂದ ಒಟ್ಟು ರೂ.8ಕೋಟಿ‌ ಬೆಲೆ ಬಾಳುವ ನಿವೇಶನ ಮತ್ತು ವಸತಿ ನಿಲಯವನ್ನು ಉಚಿತವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ ಹೆಸರಿಗೆ ನೋಂದಣಿ ಮಾಡಿಸಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯವನ್ನು ದಾನವಾಗಿ ನೀಡಿದ್ದಾರೆ ಎಂದು ಬಿಸಿಎಂ ಅಧಿಕಾರಿ ಸುರೇಶಬಾಬು ಅವರು ತಿಳಿಸಿದ್ದಾರೆ.

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರ ಸಮಕ್ಷಮದಲ್ಲಿ ಕೊಡುಗೈದಾನಿ‌ ಟಪಾಲ್ ಭವಾನಿ ಪ್ರಸಾದ್ ಅವರು ಬಿಸಿಎಂ ಇಲಾಖೆಗೆ 8ಕೋಟಿ‌ ರೂ. ಮೌಲ್ಯದ ಹಾಸ್ಟೆಲ್ ಅನ್ನು ಹಸ್ತಾಂತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಸಹ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಉದಾರ ಮನಸ್ಸಿನಿಂದ ಮುಂದೆ ಬಂದಿರುವುದಕ್ಕೆ ಟಪಾಲ್ ಭವಾನಿ‌ಪ್ರಸಾದ್ ಅವರನ್ನು ಅಭಿನಂದಿಸಿದರು.

Share.
Exit mobile version