ಬೆಂಗಳೂರು: “ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಇನ್ನುಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಸಿಗಲಿದೆ.

ಮಾರಣಾಂತಿಕ ಕಾಯಿಲೆಗಳೂ ಸೇರಿದಂತೆ 1,226 ಆರೋಗ್ಯ ಸಮಸ್ಯೆಗಳಿಗೆ ಮಲ್ಪಿ ಸ್ಪೆಷ್ಟಾಲಿಟಿ ಆಸ್ಪತ್ರೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಂಪೂರ್ಣ ನಗದುರಹಿತ ಚಿಕಿತ್ಸೆ ಸಿಗುವ ‘ಕರ್ನಾಟಕ ರಾಜ್ಯ ಸರಕಾರಿ ನೌಕರರ ಉಚಿತ ಆರೋಗ್ಯ ಯೋಜನೆ’ಗೆ ರಾಜ್ಯ ಸರಕಾರ ಅಂಗೀಕಾರ ನೀಡಿದೆ. ಹೊಸ ವರ್ಷದಿಂದ ಯೋಜನೆ ಜಾರಿಗೆ ಬರಲಿದೆ ” ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದರು.

”ರಾಜ್ಯ ಸರಕಾರದ 5.50 ಲಕ್ಷ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಜನವರಿಯಲ್ಲಿ ಜಾರಿಯಾಗಲಿದೆ. ಅನಿರೀಕ್ಷಿತವಾಗಿ ಕೋವಿಡ್‌ ವೈರಾಣು ಕಾಣಿಸಿಕೊಂಡು ಸಾಕಷ್ಟು ಸಾವುನೋವು ಸಂಭವಿಸಿದ್ದರಿಂದ ಮುಂದೆ ಕಾಣಿಸಿಕೊಳ್ಳಬಹುದಾದ ಹೊಸ ಕಾಯಿಲೆಗಳು ಸೇರಿದಂತೆ 1226 ಬಗೆಯ ಕಾಯಿಲೆಗಳಿಗೆ ರಾಜ್ಯದ 888 ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಆ ಮೂಲಕ ಸರಕಾರಿ ನೌಕರರ ವರ್ಗಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಮೂಲಕ ಹೆಚ್ಚಿನ ಭದ್ರತೆ ಸಿಗಲಿದೆ’ ಎಂದು ವಿವರಿಸಿದರು.

”ನಿವೃತ್ತ ನೌಕರರಿಗೆ ಈ ಸೌಲಭ್ಯ ವಿಸ್ತರಣೆ ಸಂಬಂಧ ಪ್ರಯತ್ನ ನಡೆಸಲು ಚಿಂತಿಸಲಾಗಿದೆ. 4.50 ಲಕ್ಷ ನಿವೃತ್ತ ನೌಕರರಿದ್ದು, ಅವರಿಗೂ ಆಯ್ದ ಆರೋಗ್ಯ ಸಮಸ್ಯೆಗಳಿಗೆ ನಗದುರಹಿತ ಚಿಕಿತ್ಸೆ ಕಲ್ಪಿಸಲು ಪ್ರಯತ್ನಿಸಲಾಗುವುದು. ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಯಾಗುವ ಬ್ಯಾಂಕ್‌ ಖಾತೆಯಿಂದಲೇ ಶುಲ್ಕ ಕಡಿತ ಮಾಡಿಕೊಂಡು ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ,” ಎಂದು ಹೇಳಿದರು.

ಕೆಜಿಐಡಿ ಸೇವೆ ಆನ್‌ಲೈನ್‌

”ಕೆಜಿಐಡಿಯಡಿ ಸಾಮೂಹಿಕ ಪಿಂಚಣಿ ವ್ಯವಸ್ಥೆಯಡಿ ವೇತನ ಪರಿಷ್ಕರಣೆಗೆ ಪೂರಕವಾಗಿ ವಿಮೆ ಮೊತ್ತ ಕಡಿತ, ವರ್ಗಾವಣೆಗೊಂಡ ನೌಕರರ ವಿಮೆ ವಿವರ ದಾಖಲಾತಿ, ಬಾಕಿ ವಿವರ, ಮುಂಗಡ, ಬಡ್ಡಿ, ಲಾಭಾಂಶ ಮಾಹಿತಿ ಸಕಾಲದಲ್ಲಿಸಿಗದೆ ತೊಂದರೆ ಅನುಭವಿಸುವಂತಾಗಿತ್ತು. ಜತೆಗೆ ಲೋಪ, ಅಕ್ರಮಗಳಿಗೂ ಅವಕಾಶವಾಗುತ್ತಿತ್ತು. ಈಗ ಆನ್‌ಲೈನ್‌ನಲ್ಲೇ ಎಲ್ಲಮಾಹಿತಿ ಸಿಗುವ ವ್ಯವಸ್ಥೆ ಜಾರಿಯಾಗುತ್ತಿದೆ,” ಎಂದು ಸಿ.ಎಸ್‌.ಷಡಾಕ್ಷರಿ ಹೇಳಿದರು.

”ಈಗಾಗಲೇ 42 ಲಕ್ಷ ವಿಮಾ ಪಾಲಿಸಿಗಳ ವಿವರ ಆನ್‌ಲೈನ್‌ನಲ್ಲಿ ಲಭ್ಯವಿದೆ. ಪ್ರಾಯೋಗಿಕ ಪರಿಶೀಲನೆಯೂ ಪೂರ್ಣಗೊಂಡಿದ್ದು, 15 ದಿನದೊಳಗೆ ಮುಖ್ಯಮಂತ್ರಿಗಳೇ ಚಾಲನೆ ನೀಡುವ ಸಾಧ್ಯತೆಯಿದೆ. ಮುಂಗಡ, ಸಾಲ, ಬಡ್ಡಿ, ಲಾಭಾಂಶ ಡಿವಿಡೆಂಡ್‌ ಇತರೆ ಸೇವೆ, ಮಾಹಿತಿ 24 ಗಂಟೆಯಲ್ಲಿಸಿಗಲಿದೆ. ವೇತನ ವಿವರ, ಮೂಲ ವೇತನ, ಕಡಿತ ಮೊತ್ತ, ಇತರೆ ವಿವರ ಮೊಬೈಲ್‌ನಲ್ಲೇ ಸಿಗಲಿದೆ. ಸಂಘದ ನಿರಂತರ ಪ್ರಯತ್ನದ ಪರಿಣಾಮ ಆನ್‌ಲೈನ್‌ ವ್ಯವಸ್ಥೆ ಶೀಘ್ರವೇ ಲಭ್ಯವಾಗಲಿದೆ” ಎಂದು ನುಡಿದರು.

Share.
Exit mobile version