ಬೆಂಗಳೂರು : ನೈಋತ್ಯ ರೈಲ್ವೆ ಇಲಾಖೆಯು ಕನ್ನಡಿಗ ನೌಕರರಿಗೆ ಬಿಗ್‌ ಶಾಕ್‌ ನೀಡಿದೆ. ನೈಋತ್ಯ ರೈಲ್ವೆ ನಡೆಸುತ್ತಿರುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇವಲ ಹಿಂದಿ, ಇಂಗ್ಲಿಷ್‌ ನಲ್ಲಿ ಬರೆಯುವ ಅವಕಾಶ ನೀಡಿದ್ದು, ಕನ್ನಡಿಗರಿಗೆ ಉನ್ನತ ಹುದ್ದೆಗಳು ಕೈತಪ್ಪುವಂತಾಗಿದೆ.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗಿಯ ಎಲೆಕ್ಟ್ರಿಕಲ್‌ ಸೆಕ್ಷನ್‌ ನಿಂದ ಬಡ್ತಿ ಮೀಸಲಿಗೆ ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ಪರೀಕ್ಷೆಗೆ ಅಧಿಸೂಚನೆ ಪ್ರಕಟವಾಗಿದ್ದು, ಪರೀಕ್ಷೆಯು ಕೇವಲ ಹಿಂದಿ, ಇಂಗ್ಲಿಷ್‌ ನಲ್ಲಿ ಬರೆಯಲು ಮಾತ್ರ ಅವಕಾಶ ನೀಡಲಾಗಿದೆ. ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಹೀಗಾಗಿ ಕನ್ನಡಿಗ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ.

ರೈಲ್ವೆ ಇಲಾಖೆಯೊಳಗೆ ಬಡ್ತಿ ಮೀಸಲು ಹುದ್ದೆಗಳ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಈ ವೇಳೆ ಕಡಾಯವಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯುವ ಆಯ್ಕೆ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

Share.
Exit mobile version