ಚಾಮರಾಜನಗರ: ಕಳೆದ ಹಲವು ದಿನಗಳಿಂದ ಸ್ಥಳೀಯರು ಹಾಗೂ ಭಕ್ತಾದಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ನಿರಂತರ ಕಾರ್ಯಾಚರಣೆಯ ಫಲವಾಗಿ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಪೋಷಕರ ಕಣ್ಣೆದುರೇ ನಡೆದಿತ್ತು ಘೋರ ದುರಂತ: ಕೆಲವು ದಿನಗಳ ಹಿಂದೆ ಬೆಂಗಳೂರು ಮೂಲದ ಕುಟುಂಬವೊಂದು ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ತೆರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿತ್ತು. ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಪೋಷಕರ ಕಣ್ಣೆದುರೇ ಹೊಂಚು ಹಾಕಿ ಕುಳಿತಿದ್ದ ಚಿರತೆಯು ಹಠಾತ್ತಾಗಿ ದಾಳಿ ನಡೆಸಿ, ಕಾಡಿನೊಳಗೆ ಎಳೆದೊಯ್ದು ಭೀಕರವಾಗಿ ಕೊಂದು ಹಾಕಿತ್ತು. ಈ ಘಟನೆಯು ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತಲ್ಲದೆ, ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಲ್ಲಿ ಭೀತಿಯ ವಾತಾವರಣ ನಿರ್ಮಿಸಿತ್ತು.
೧೫ ದಿನಗಳ ನಿರಂತರ ಕಾರ್ಯಾಚರಣೆ: ಬಾಲಕನ ಸಾವಿನ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಚಿರತೆಯನ್ನು ಸೆರೆಹಿಡಿಯಲು ಬೃಹತ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಕಳೆದ 15 ದಿನಗಳಿಂದ ಅರಣ್ಯ ಸಿಬ್ಬಂದಿಯ ಹಗಲಿರುಳು ಶ್ರಮಿಸಿದ್ದರು. ಚಿರತೆಯ ಚಲನವಲನಗಳನ್ನು ಪತ್ತೆಹಚ್ಚಲು ಕಾಡಿನ ವಿವಿಧ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಹಾಗೂ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಲಾಗಿತ್ತು. ಆರಂಭದಲ್ಲಿ ಚಿರತೆಯು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತಾದರೂ, ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬೀಳದೆ ಜಾಣ್ಮೆಯಿಂದ ತಪ್ಪಿಸಿಕೊಳ್ಳುತ್ತಾ ಸಿಬ್ಬಂದಿಗೆ ಸವಾಲೊಡ್ಡಿತ್ತು.
ರಾತ್ರೋರಾತ್ರಿ ಸಿಕ್ಕ ಯಶಸ್ಸು: ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಪ್ರಯತ್ನವನ್ನು ಕೈಬಿಡದೆ ಚಿರತೆಯ ಸಾಗುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿ ಇಂಡಿಗನತ್ತ ಸಮೀಪ ಪ್ರತ್ಯೇಕ ಬೋನನ್ನು ಇರಿಸಿದ್ದರು. ಭಾನುವಾರ ರಾತ್ರಿ ಎಂದಿನಂತೆ ಆಹಾರದ ಹುಡುಕಾಟದಲ್ಲಿದ್ದ ಚಿರತೆಯು ಅರಣ್ಯ ಇಲಾಖೆ ಇಟ್ಟಿದ್ದ ಆಮಿಷಕ್ಕೆ ಒಳಗಾಗಿ ಬೋನಿನೊಳಗೆ ಪ್ರವೇಶಿಸುತ್ತಿದ್ದಂತೆ ಬಂಧಿಯಾಗಿದೆ. ರಾತ್ರೋರಾತ್ರಿ ಚಿರತೆ ಬೋನಿಗೆ ಬಿದ್ದಿರುವುದು ಅರಣ್ಯ ಇಲಾಖೆಯ ತೀವ್ರ ಕಾರ್ಯಾಚರಣೆಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.
ಸ್ಥಳೀಯರಲ್ಲಿ ನಿರಾಳತೆ: ನರಭಕ್ಷಕ ಚಿರತೆ ಸೆರೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಳೆದ ಹಲವು ದಿನಗಳಿಂದ ಭಯದ ನೆರಳಿನಲ್ಲಿ ಬದುಕುತ್ತಿದ್ದ ಇಂಡಿಗನತ್ತ ಹಾಗೂ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಸಿಕ್ಕ ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.








