ಶಿವಮೊಗ್ಗ : ನಿನ್ನೆ ನಡೆದ ಗ್ಯಾಂಗ್ ವಾರ್​​ನಿಂದ ಶಿವಮೊಗ್ಗದ ಜನ ಕಂಗಾಲಾಗಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದುಷ್ಟ ಶಕ್ತಿಗಳು ಬಿಲದಿಂದ ಹೊರ ಬಂದಿವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಆರೋಪಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಆಡಳಿತದಲ್ಲಿ ತುಷ್ಟೀಕರಣದ ನೀತಿಯಿಂದಾಗಿ ಪೊಲೀಸರ ಮಾನಸಿಕತೆ ಸಹ ಹಾಳಾಗಿದೆ. ಕಾನೂನು ಸುವ್ಯವಸ್ಥೆಗಿಂತ ಪೊಲೀಸರು ಬೇರೆ ರೀತಿ ಯೋಚನೆ ಮಾಡುತ್ತಿದ್ದಾರೆ ಎಂದು ಇತ್ತೀಚಿನ ದಿನಗಳಲ್ಲಿ ನಡೆದ ಅನೇಕ ಪ್ರಕರಣಗಳಿಂದ ನಮಗೆ ಅನ್ನಿಸುತ್ತಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದುಷ್ಟ ಶಕ್ತಿಗಳು ಬಿಲದಿಂದ ಹೊರ ಬಂದು ಜಾಗೃತವಾಗಿವೆ. ಅದೇ ರೀತಿ ಶಿವಮೊಗ್ಗ ಮತ್ತೆ ಆ ದಿನಗಳಿಗೆ ಮರಳುತ್ತಿದೆ. ಇದು ಎಲ್ಲರನ್ನೂ ಭಯಭೀತರನ್ನಾಗಿ ಮಾಡಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ನಡೆದ ರಾಗಿಗುಡ್ಡದ ಘಟನೆಯಿಂದ ಹಿಡಿದು ಶಿವಮೊಗ್ಗ ಪೊಲೀಸರು ದ್ರೋಹಿಗಳನ್ನು ನಿರ್ವಹಿಸದ ರೀತಿ ಕೆಲಸ ಮಾಡುವವರಿಗೆ ಕೆಟ್ಟ ಸಂದೇಶ ಕೊಟ್ಟಿದೆ. ಇದರ ಪರಿಣಾಮ ನಿನ್ನೆ ನಡೆದಿರುವ ಗ್ಯಾಂಗ್ ವಾರ್ ಸಾಕ್ಷಿ. ನಿತ್ಯ ಗ್ರಾಮೀಣ ಭಾಗದಿಂದ ಬಂದು ಹೋಗುವ ಹೆಣ್ಣು ಮಕ್ಕಳು ಭಯ ಭೀತರಾಗಿದ್ದಾರೆ ಎಂದರು.

Share.
Exit mobile version