ಅಗರ್ವಾಲ್ ಕುಟುಂಬವು ಅತ್ಯಂತ ದುರಂತ ಅಂತ್ಯವನ್ನು ಕಂಡಿದೆ. ಕಳೆದ ವಾರ ದೆಹಲಿಯ ಮಾಳವೀಯ ನಗರದ ಹೋಟೆಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಈ ಕುಟುಂಬದ ಎಂಟು ಮಂದಿ ಸದಸ್ಯರು ಮೃತಪಟ್ಟಿದ್ದರು. ಇದೀಗ ಆ ಕುಟುಂಬದ ಏಕೈಕ ಬದುಕುಳಿದ ಸದಸ್ಯ, 80 ವರ್ಷದ ರಾಧೆ ಶ್ಯಾಮ್ ಅಗರ್ವಾಲ್ ಅವರು ಇಂದು ಕೊನೆಯುಸಿರೆಳೆದಿದ್ದು, ಈ ಕುಟುಂಬದಲ್ಲಿ ಇನ್ನು ಯಾರೂ ಉಳಿದಿಲ್ಲದಂತಾಗಿದೆ.
ಈ ದುರಂತದ ಬಗ್ಗೆ ಅರಿವಿಲ್ಲದ ಮನೆಯ ಯಜಮಾನ, ಸಾಕೇತ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಆರೋಗ್ಯದ ದೃಷ್ಟಿಯಿಂದಲೇ ಕುಟುಂಬವು ಬೆಂಕಿ ಅವಘಡ ಸಂಭವಿಸಿದ ‘ಫ್ಲೋರಿಶ್ ಇನ್’ (B&B) ಹೋಟೆಲ್ನಲ್ಲಿ ಉಳಿಯಲು ನಿರ್ಧರಿಸಿತ್ತು. ಅಂದಿನಿಂದ, ಆಸ್ಪತ್ರೆಯಲ್ಲಿ ತನ್ನ ಕುಟುಂಬದ ಸದಸ್ಯರು ಏಕೆ ಬರುತ್ತಿಲ್ಲ ಎಂದು ಅಗರ್ವಾಲ್ ಪದೇ ಪದೇ ವಿಚಾರಿಸುತ್ತಿದ್ದರು, ಆದರೆ ಆಸ್ಪತ್ರೆಯ ಸಮೀಪವೇ ನಡೆದ ಆ ಭೀಕರ ದುರಂತದ ಬಗ್ಗೆ ಅವರಿಗೆ ಕಿಂಚಿತ್ತೂ ಅರಿವಿರಲಿಲ್ಲ.
ವಿವೇಕ್ ಅಗರ್ವಾಲ್, ಅವರ ತಾಯಿ ಪ್ರೇಮ್ ಲತಾ ಅಗರ್ವಾಲ್, ಪತ್ನಿ ತರ್ಜನಿ ಅಗರ್ವಾಲ್, ಇಬ್ಬರು ಪುತ್ರಿಯರಾದ ಜಿವಿಷಾ ಮತ್ತು ವರ್ಯಾ ಹಾಗೂ ಮೂವರು ಸಂಬಂಧಿಕರು, ಮನೆಯ ಯಜಮಾನನ ಆರೈಕೆಗಾಗಿ ಈ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಸಂಚಾರ ದಟ್ಟಣೆ ಮತ್ತು ಆಸ್ಪತ್ರೆಗೆ ಹೋಗಲು ಇರುವ ದೂರವನ್ನು ಗಮನದಲ್ಲಿಟ್ಟುಕೊಂಡು, ಯಜಮಾನರ ಅಗತ್ಯಗಳನ್ನು ಪೂರೈಸಲು ಕುಟುಂಬವು ಹೋಟೆಲ್ನಲ್ಲಿ ಉಳಿಯಲು ತೀರ್ಮಾನಿಸಿತ್ತು.
ಮನೆಯ ಯಜಮಾನನ ಆರೋಗ್ಯವು ಕ್ಷೀಣಿಸುತ್ತಿದೆ ಮತ್ತು ಯಾವುದಕ್ಕೂ ಸಿದ್ಧರಾಗಿರುವಂತೆ ಕುಟುಂಬಕ್ಕೆ ವೈದ್ಯರು ತಿಳಿಸಿದ್ದರು. ದೂರದ ಸಂಬಂಧಿಗಳ ಪ್ರಕಾರ, ಯಜಮಾನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಯುನಲ್ಲಿದ್ದರು. ದುರಂತ ಸಂಭವಿಸಿದ ದಿನ, ಸಾಮಾನ್ಯವಾಗಿ ಭೇಟಿಯ ಸಮಯವಾದ ಬೆಳಗ್ಗೆ 11:30 ಕ್ಕೆ ಕುಟುಂಬದವರು ಅವರನ್ನು ಭೇಟಿಯಾಗಬೇಕಿತ್ತು.
ವಿವೇಕ್ ಅಗರ್ವಾಲ್ ಅವರ ಹಿರಿಯ ಮಗಳು ಜಿವಿಷಾ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ತನ್ನ ಅಜ್ಜನಿಗಾಗಿ ವಿದಾಯ ಹೇಳಲು ವಿಶೇಷವಾಗಿ ವಿಮಾನದಲ್ಲಿ ಬಂದಿದ್ದಳು. ಸಂಬಂಧಿಗಳ ಪ್ರಕಾರ, ತನ್ನ ಮೊಮ್ಮಗಳು ದೂರದ ನಗರದಿಂದ ತನ್ನನ್ನು ನೋಡಲು ಬಂದಿದ್ದಾಳೆ ಎಂದು ಅಜ್ಜ ಅತೀವ ಸಂತೋಷದಿಂದ ನರ್ಸ್ಗಳಿಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಜ್ಜನಿಗಾಗಿ ಮೊಮ್ಮಗಳು ವಿದಾಯ ಹೇಳಲು ಬಂದಿದ್ದಾಳೆ ಎಂದು ಭಾವಿಸಲಾಗಿತ್ತು, ಆದರೆ ಅಂತಿಮವಾಗಿ ನಡೆದದ್ದು ಅದಕ್ಕೆ ತದ್ವಿರುದ್ಧವಾದ ಘಟನೆ.
ಈಗ ಅಜ್ಜನಿಗೂ ಸಾವು ಸಂಭವಿಸಿರುವುದರಿಂದ, ಗುರುಗ್ರಾಮದ ಸೆಕ್ಟರ್ 46 ರಲ್ಲಿರುವ ಅವರ ಮನೆ ಸಂಪೂರ್ಣ ಬಿಕೋ ಎನ್ನುತ್ತಿದೆ. ಕುಟುಂಬದ ಯಾವೊಬ್ಬ ಸದಸ್ಯರೂ ಜೀವಂತವಾಗಿಲ್ಲದಿರುವುದರಿಂದ, ಒಂದು ಕಾಲದಲ್ಲಿ ನಗು, ಸಂತೋಷದಿಂದ ತುಂಬಿದ್ದ ಆ ಮನೆ ಇದೀಗ ಮೌನಕ್ಕೆ ಶರಣಾಗಿದೆ. ಒಂದು ವಾರದ ಅಂತರದಲ್ಲಿ ಒಂಬತ್ತು ಸದಸ್ಯರನ್ನು ಕಳೆದುಕೊಂಡಿರುವ ಈ ದುರಂತ, ಅವರ ಉಳಿದ ಸಂಬಂಧಿಗಳ ಪಾಲಿಗೆ ಎಂದಿಗೂ ತುಂಬಲಾಗದ ಶೂನ್ಯವನ್ನು ಉಳಿಸಿಹೋಗಿದೆ.








