ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಹಾಗೂ ಸಮಾಜವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ತೀರ್ಮಾನದ ಬೆನ್ನಲ್ಲೇ, ರಾಜ್ಯದಾದ್ಯಂತ ವೃತ್ತ (ಸರ್ಕಲ್) ಹಾಗೂ ಪೊಲೀಸ್ ಠಾಣಾ ಮಟ್ಟದಲ್ಲಿ ವಿಶೇಷ “ಆಂಟಿ ರೌಡಿ ಸ್ಕ್ವಾಡ್” (ರೌಡಿ ನಿಗ್ರಹ ದಳ)ಗಳನ್ನು ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಬದುಕಲು ರೌಡಿಸಂ ಮುಕ್ತ ಸಮಾಜ ಅತ್ಯಗತ್ಯ ಎಂದು ಜೂನ್ 5, 2026 ರಂದು ಹೊರಡಿಸಲಾದ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
‘ಆಂಟಿ ರೌಡಿ ಸ್ಕ್ವಾಡ್’ ಹೇಗೆ ಕೆಲಸ ಮಾಡಲಿದೆ?
ಪ್ರತಿ ವೃತ್ತ ಹಾಗೂ ಠಾಣೆಗಳಲ್ಲೂ ದಳ: ಇನ್ ಇಲಾಖೆಯ ಆದೇಶದಂತೆ ಪ್ರತಿ ಪೊಲೀಸ್ ವೃತ್ತದಲ್ಲೂ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ವಿಶೇಷ “ರೌಡಿ ಸ್ಕ್ವಾಡ್” ಇರಲಿದೆ. ಇದರೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ಗಳಿರುವ ಠಾಣೆಗಳಲ್ಲೂ (PI Station) ಪ್ರತ್ಯೇಕ ಠಾಣಾ ಮಟ್ಟದ ತಂಡವನ್ನು ರಚಿಸಲಾಗುತ್ತದೆ.
ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ರಚನೆ: ಸ್ಥಳೀಯ ಅಪರಾಧದ ಸ್ವರೂಪ ಮತ್ತು ಅಗತ್ಯತೆಗಳನ್ನು ಪರಿಗಣಿಸಿ ಆಯಾ ಉಪವಿಭಾಗದ ಪೊಲೀಸ್ ಅಧಿಕಾರಿಗಳು (DYSP/ACP) ಈ ರೌಡಿ ದಳಗಳ ಸಿಬ್ಬಂದಿ ಸಂಯೋಜನೆಯನ್ನು ನಿರ್ಧರಿಸಲಿದ್ದಾರೆ.
ರೌಡಿ ದಳಗಳ ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು:
ಹೊಸ ರೌಡಿ ಶೀಟ್ ಓಪನ್: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಹಿನ್ನೆಲೆಯನ್ನು ಪರಿಶೀಲಿಸಿ, ನಿಯಮಾವಳಿಗಳ ಪ್ರಕಾರ ಹೊಸದಾಗಿ ರೌಡಿ ಶೀಟ್ ತೆರೆಯುವ ಜವಾಬ್ದಾರಿಯನ್ನು ಈ ದಳಕ್ಕೆ ವಹಿಸಲಾಗಿದೆ. ಇದರಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
ನಿರಂತರ ನಿಗಾ ಮತ್ತು ತಪಾಸಣೆ: ರೌಡಿ ಶೀಟರ್ಗಳ ಇತ್ತೀಚಿನ ಚಟುವಟಿಕೆಗಳು, ಅವರ ಸಂಪರ್ಕಗಳು ಮತ್ತು ಓಡಾಟದ ಮೇಲೆ ಈ ದಳಗಳು ಕಟ್ಟುನಿಟ್ಟಿನ ನಿಗಾ ಇಡಲಿವೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹಠಾತ್ ದಾಳಿಗಳನ್ನು ನಡೆಸಲಿವೆ.
ಕಠಿಣ ಕಾಯ್ದೆಗಳ ಅಡಿ ಕ್ರಮ: ಸಾರ್ವಜನಿಕ ಶಾಂತಿಗೆ ಭಂಗ ತರುವ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ, ಕೋಕಾ (KCOCA) ಕಾಯ್ದೆ ಹಾಗೂ ಗಡಿಪಾರು (Externment) ನಂತಹ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ.
ಹೊಸ ಗ್ಯಾಂಗ್ಗಳ ಪತ್ತೆ: ಸಮಾಜದಲ್ಲಿ ಹೊಸದಾಗಿ ತಲೆ ಎತ್ತುತ್ತಿರುವ ಅಪರಾಧಿ ಗುಂಪುಗಳು ಮತ್ತು ಗ್ಯಾಂಗ್ಗಳನ್ನು ಗುರುತಿಸಿ, ಅವರ ವಿರುದ್ಧ ಗುಪ್ತಚರ ಮಾಹಿತಿ ಸಂಗ್ರಹಿಸುವುದು.
ಹೊಣೆಗಾರಿಕೆ ಮತ್ತು ಪ್ರಗತಿ ಪರಿಶೀಲನೆ:
ಈ ವಿಶೇಷ ದಳಗಳು ಕೇವಲ ಹೆಸರಿಗಷ್ಟೇ ಇರಬಾರದು ಎಂಬ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿದೆ:
ವೃತ್ತ ನಿರೀಕ್ಷಕರು (CI) ಮತ್ತು ಠಾಣಾಧಿಕಾರಿಗಳು (SHO) ಪ್ರತಿ 15 ದಿನಗಳಿಗೊಮ್ಮೆ ಈ ರೌಡಿ ದಳಗಳ ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಬೇಕು.
ಎಸಿಪಿ ಮತ್ತು ಡಿವೈಎಸ್ಪಿಗಳು ಪ್ರತಿ ತಿಂಗಳ ಅಪರಾಧ ಪರಾಮರ್ಶೆ ಸಭೆಯಲ್ಲಿ ಈ ರೌಡಿ ದಳಗಳ ಸಾಧನೆಯನ್ನು ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ನಡೆಸಬೇಕು.
ರೌಡಿ ದಳದ ಯಶಸ್ಸು ಮತ್ತು ದೈನಂದಿನ ಚಟುವಟಿಕೆಗಳನ್ನು ದಾಖಲಿಸಲು ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಬೇಕಾಗಿದ್ದು, ಪ್ರತಿ ತಿಂಗಳು ಇದರ ವರದಿಯನ್ನು ಉನ್ನತಾಧಿಕಾರಿಗಳಿಗೆ ರವಾನಿಸಬೇಕು.
‘ಝೀರೋ ಟಾಲರೆನ್ಸ್’ ನೀತಿ:
ರೌಡಿ ಅಂಶಗಳಿಂದ ಸಾರ್ವಜನಿಕರಿಗೆ ಬೆದರಿಕೆ, ಹಫ್ತಾ ವಸೂಲಿ, ಸುಲಿಗೆ ಅಥವಾ ಗ್ಯಾಂಗ್ ವಾರ್ಗಳಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರು ‘ಝೀರೋ ಟಾಲರೆನ್ಸ್’ (ಶೂನ್ಯ ಸಹಿಷ್ಣುತೆ) ನೀತಿಯನ್ನು ಅಳವಡಿಸಿಕೊಂಡು ತಕ್ಷಣವೇ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಜಿ-ಐಜಿಪಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಸುತ್ತೋಲೆ ತಲುಪಿದ ಏಳು ದಿನಗಳ ಒಳಗಾಗಿ ತಮ್ಮ ವ್ಯಾಪ್ತಿಯಲ್ಲಿ ರೌಡಿ ದಳಗಳನ್ನು ರಚಿಸಿ, ಆ ಕುರಿತು ಪಾಲನಾ ವರದಿಯನ್ನು (Compliance Report) ಪೊಲೀಸ್ ಪ್ರಧಾನ ಕಚೇರಿಗೆ ಸಲ್ಲಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಕಮಿಷನರ್ಗಳು, ವಲಯ ಐಜಿಪಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಆದೇಶಿಸಲಾಗಿದೆ.
“ನಾಗರಿಕರ ಸುರಕ್ಷತೆ
ನಮ್ಮ ಪ್ರಥಮ ಆದ್ಯತೆ”ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಗುರಿಯಾಗಿದ್ದು, ರಾಜ್ಯದ ಇತಿಹಾಸದಲ್ಲೆ ನಾವೊಂದು ವಿನೂತನ ಹಾಗೂ ದಿಟ್ಟ ಹೆಜ್ಜೆಯನ್ನು ಇರಿಸಿದ್ದೇವೆ.
ರೌಡಿ ಗ್ಯಾಂಗ್ಗಳು, ಹ್ಯಾಬಿಚ್ಯುಯಲ್ ಅಫೆಂಡರ್ಸ್ಗಳ ಮೇಲೆ ನಿರಂತರ ನಿಗಾ ಇಡಲು ಪ್ರತಿ… pic.twitter.com/GU66bDYXIJ
— DIPR Karnataka (@KarnatakaVarthe) June 9, 2026








