ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಎರಡು ತಿಂಗಳ ಪಡಿತರ ಅಕ್ಕಿ ಪಡೆಯಲು ಫಲಾನುಭವಿಗಳು ಎರಡು ಬಾರಿ ಬೆರಳಚ್ಚು ನೀಡುವ ಅಗತ್ಯವಿಲ್ಲ. ಕೇವಲ ಒಂದೇ ಬಾರಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅಕ್ಕಿ ಪಡೆಯಬಹುದಾಗಿದೆ.
ಕಳೆದ ತಿಂಗಳು ಪಡಿತರ ವಿತರಣೆಯ ವೇಳೆ ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳ ಕಾರಣ ಅನೇಕ ಫಲಾನುಭವಿಗಳು ಸಂಕಷ್ಟ ಅನುಭವಿಸಿದ್ದರು. ವಿಶೇಷವಾಗಿ ಎರಡು ತಿಂಗಳ ಅಕ್ಕಿಯನ್ನು ಒಟ್ಟಿಗೆ ವಿತರಿಸುತ್ತಿದ್ದರಿಂದ ಎರಡು ಬಾರಿ ಬೆರಳಚ್ಚು ಪಡೆಯುವ ಪ್ರಕ್ರಿಯೆ ಜನರಿಗೆ ತೊಂದರೆ ಉಂಟುಮಾಡಿತ್ತು.
ಈ ಸಮಸ್ಯೆ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ಆಹಾರ ಇಲಾಖೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಹೊಸ ಮಾರ್ಗಸೂಚಿ ನೀಡಿದೆ. ಅದರಂತೆ, ಫಲಾನುಭವಿಗಳಿಂದ ಕೇವಲ ಒಂದು ಬಾರಿ ಬೆರಳಚ್ಚು ಪಡೆದು ಎರಡು ತಿಂಗಳ ಅಕ್ಕಿಯನ್ನು ವಿತರಿಸಬೇಕು ಎಂದು ಸೂಚಿಸಲಾಗಿದೆ.
ಮೇ-ಜೂನ್ ತಿಂಗಳ ಅಕ್ಕಿ ಒಂದೇ ಬಾರಿ ವಿತರಣೆ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಈಗಾಗಲೇ ಒಟ್ಟಿಗೆ ವಿತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಪಾಲಿನ ಅಕ್ಕಿ ಮೊದಲು ನೀಡಲಾಗಿದ್ದರೂ, ರಾಜ್ಯದ ಪಾಲಿನ ಅಕ್ಕಿ ವಿತರಣೆ ಬಾಕಿ ಉಳಿದಿತ್ತು.ಈಗ ಮೇ ಮತ್ತು ಜೂನ್ ತಿಂಗಳ ರಾಜ್ಯದ ಪಾಲಿನ ಅಕ್ಕಿಯನ್ನು ಜೂನ್ ತಿಂಗಳಲ್ಲೇ ಒಟ್ಟಿಗೆ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಫಲಾನುಭವಿಗಳಿಗೆ ಸುಗಮ ಸೇವೆ ಒದಗಿಸಲು ಹೊಸ ಕ್ರಮ ಕೈಗೊಳ್ಳಲಾಗಿದೆ.
ಪಡಿತರ ಪಡೆಯುವ ಸಮಯದಲ್ಲೂ ಬದಲಾವಣೆ
ಪಡಿತರ ಚೀಟಿದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲೂ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆ ನಡೆಯಲಿದ್ದು, ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಪಡಿತರ ಪಡೆಯಬಹುದು.ಸರ್ವರ್ ಸಮಸ್ಯೆಯಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡಿ, ಪಡಿತರ ವಿತರಣೆಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ಆಹಾರ ಇಲಾಖೆ ಕೈಗೊಂಡಿರುವ ಈ ಕ್ರಮ ಲಕ್ಷಾಂತರ ಪಡಿತರ ಚೀಟಿದಾರರಿಗೆ ನೆರವಾಗಲಿದೆ.








