ಬೆಂಗಳೂರು: ಜಗತ್ತಿನಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ ಹಲವು ಕ್ರಾಂತಿ ನಡೆದಿದೆ. ಆದರೆ ಸರ್ವರ ಸಮಾನತೆಗಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಮೊದಲಿಗೆ ಕ್ರಾಂತಿ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ಬೊಮ್ಮನಹಳ್ಳಿ ವಿಧಾನಸಭಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೇಣಿರಹಿತ, ಲಿಂಗಭೇದರಹಿತ, ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಾದಿ ಪ್ರಮಥರು ಕಲ್ಯಾಣ ಕ್ರಾಂತಿಯನ್ನೇ ಮಾಡಿದರು ಎಂದರು.
ಶರಣರು ಸಕಲ ಜೀವಾತ್ಮರಿಕೆ ಲೇಸನ್ನೇ ಬಯಸಿದರು. ಜಾತಿಯತೆ, ಮೇಲು ಕೀಳು ಎಂಬ ಭಾವನೆ, ಅಸ್ಪೃಶ್ಯತೆ, ಕಂದಾಚಾರ, ಮೌಢ್ಯ ತುಂಬಿದ್ದ ಸಮಾಜದಲ್ಲಿ ವೈಚಾರಿಕ ಮನೋಭಾವ ಮೂಡಿಸಲು, ಸೋದರತ್ವ, ಸಹಬಾಳ್ವೆಯ ಭವ್ಯ, ದಿವ್ಯ ಸಮಾಜ ಕಟ್ಟಲು ಯತ್ನಿಸಿದರು ಎಂದರು.
ಮಾನವಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರೇಣುಕಾದಿ ಆಚಾರ್ಯರು ಪ್ರತಿಪಾದಿಸಿದರೆ, ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮೆಲ್ಲರಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜೋದ್ದಾರ ಸಾಧ್ಯ ಎಂದರು.
ಯುವಜನರು ಯಾವುದೇ ಸಮಾಜದ ಬೆನ್ನೆಲುಬು. ಇಂದು ಯುವಜನರು ದಾರಿ ತಪ್ಪುತ್ತಿದ್ದು, ದುಶ್ಚಟಗಳ, ದುರ್ವ್ಯಸನಗಳ ದಾಸರಾಗುತ್ತಿದ್ದು, ದುರ್ಗುಣಗಳಿಗೆ ಬಲಿಯಾಗುತ್ತಿದ್ದಾರೆ. ಮಾತೆಯರು, ತಮ್ಮ ಮಕ್ಕಳನ್ನು ಸರಿದಾರಿಗೆ ತರಲು ಶ್ರಮಿಸಬೇಕು. ಧರ್ಮದ ಉಳಿವಿನಲ್ಲಿ ಮಾತೆಯರ ಪಾತ್ರ ಮಹತ್ವದ್ದೆಂದರು.
ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತವೆ. ಯುವಜನರನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿ ಆಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಇಂದು ಜಗತ್ತಿನಲ್ಲಿ ಹಿಂಸೆ, ಅತ್ಯಾಚಾರ, ದೌರ್ಜನ್ಯ, ಧ್ವೇಷ ಹೆಚ್ಚುತ್ತಿದೆ ಹೆಚ್ಚುತ್ತಿದೆ. ಇಂದು ಜಗತ್ತಿಗೆ ನೆಮ್ಮದಿ, ಶಾಂತಿ ಬೇಕಾಗಿದೆ. ನಾವು ಈ ಹಂತದಲ್ಲಿ ವಿಭಜನೆಯ ಹಾದಿ ತೊರೆದು ಏಕತೆಯ ಮಾರ್ಗದಲ್ಲಿ ನಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ರಂಬಾಪುರಿಯ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಸಿದ್ದರಬೆಟ್ಟದ ಶ್ರೀ ಬೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಭಾದ ಪಾಲಿಕಾ ಘಟಕದ ಅಧ್ಯಕ್ಷ ಬಿಡದಿ ನವೀನ್, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.








