ಬೆಂಗಳೂರು: ದೇಶಾದ್ಯಂತ 2027ರ ಜನಗಣತಿ ಪ್ರಕ್ರಿಯೆಗೆ ಪೂರ್ವಸಿದ್ಧತೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಜನಗಣತಿ ಕಾರ್ಯಗಳಿಗಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು 2027ರ ಮಾರ್ಚ್ 31ರವರೆಗೆ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ಸರ್ಕಾರವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಕಾರ್ಯದರ್ಶಿಗಳು ಈ ಕುರಿತು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕೃತ ಸುತ್ತೋಲೆ ರವಾನಿಸಿದ್ದಾರೆ.
ಎರಡು ಹಂತಗಳಲ್ಲಿ ನಡೆಯಲಿದೆ 2027ರ ಜನಗಣತಿ:
ಕೇಂದ್ರ ಗೃಹ ಮಂತ್ರಾಲಯದ ಸೂಚನೆಯಂತೆ, 1948ರ ಜನಗಣತಿ ಕಾಯ್ದೆ ಹಾಗೂ 1990ರ ಜನಗಣತಿ ನಿಯಮಗಳ ಅಡಿಯಲ್ಲಿ ದೇಶಾದ್ಯಂತ ಎರಡು ಹಂತಗಳಲ್ಲಿ ಜನಗಣತಿ ಪ್ರಕ್ರಿಯೆ ನಡೆಯಲಿದೆ.
- ಮೊದಲ ಹಂತ (ಮನೆಗಳ ಪಟ್ಟಿ ಮತ್ತು ಮನೆ ಗಣತಿ – HLO): 2026ರ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ 30 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ. (ಇದರಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಸ್ವಯಂ ನೋಂದಣಿ ಹಾಗೂ ಏಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರಿಂದ ಮನೆ ಗಣತಿ ನಡೆಸಲು ಉದ್ದೇಶಿಸಲಾಗಿದೆ).
- ಎರಡನೇ ಹಂತ (ಜನಸಂಖ್ಯೆ ಗಣತಿ – PE): 2027ರ ಫೆಬ್ರವರಿ ತಿಂಗಳಿನಲ್ಲಿ ಈ ಪ್ರಕ್ರಿಯೆ ಅಧಿಕೃತವಾಗಿ ನಡೆಯಲಿದೆ.
ವರ್ಗಾವಣೆಗೆ ನಿಷೇಧ ಏಕೆ?
ಜನಗಣತಿಯಂತಹ ಶಾಸನಬದ್ಧ ಹಾಗೂ ಅತ್ಯಂತ ಜವಾಬ್ದಾರಿಯುತ ಕರ್ತವ್ಯಗಳನ್ನು ಸುಗಮವಾಗಿ ನಿರ್ವಹಿಸಲು ಈಗಾಗಲೇ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಬ್ಲಾಕ್ ಹಂತದ ಅಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಮಧ್ಯದಲ್ಲಿ ಸಿಬ್ಬಂದಿ ವರ್ಗಾವಣೆಯಾದರೆ ಜನಗಣತಿ ಕಾರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ, 2027ರ ಮಾರ್ಚ್ 31 ರವರೆಗೆ ಇಲಾಖಾವಾರು ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡದಂತೆ ಕೇಂದ್ರ ಗೃಹ ಮಂತ್ರಾಲಯದ ಕಾರ್ಯದರ್ಶಿಗಳು ನೀಡಿದ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
3 ದಿನಗಳ ಒಳಗಾಗಿ ಮಾಹಿತಿ ನೀಡಲು ಗಡುವು
ಜನಗಣತಿ ಕಾರ್ಯಕ್ಕಾಗಿ ಈಗಾಗಲೇ ತರಬೇತಿ ಪಡೆದು ನಿಯೋಜನೆಗೊಂಡಿರುವ ಅಧಿಕಾರಿಗಳ ಸಂಪೂರ್ಣ ಇಲಾಖಾವಾರು ಮಾಹಿತಿಯನ್ನು ಸರ್ಕಾರ ಒದಗಿಸಿರುವ ‘Google spread sheet’ ಲಿಂಕ್ನಲ್ಲಿ 3 ದಿನಗಳ ಒಳಗಾಗಿ ಅಪ್ಲೋಡ್ ಮಾಡುವಂತೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.









