ಮೈಸೂರು : ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿಯಲ್ಲಿ ಹುಟ್ಟುಹಬ್ಬದ ಆಚರಣೆಗೆಂದು ಕರೆಸಿಕೊಂಡ ಸ್ನೇಹಿತರೆಲ್ಲರೂ ಸೇರಿ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೆ.ಕೆ.ಸ್ವಾಮಿ ಅವರ ಪುತ್ರ ಕಿರಣ್ ಸಾವನ್ನಪ್ಪಿದ್ದಾನೆ. ಘಟನೆ ಸಂಭಂದ ಮೃತ ಕಿರಣ್ ಐವರು ಸ್ನೇಹಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನ ಕೆಂಪಿಸಿದ್ದನಹುಂಡಿ ಗ್ರಾಮದ ವಸಂತಕುಮಾರ, ಮಧುಸೂದನ, ರವಿಚಂದ್ರ, ಚಂದ್ರ, ಸಿದ್ದರಾಜು ಎಂದು ತಿಳಿದುಬಂದಿದೆ. ಜುಲೈ 15ರಂದು ಸ್ನೇಹಿತ ರವಿಚಂದ್ರ ಎಂಬುವವನ ಹುಟ್ಟುಹಬ್ಬದ ಆಚರಣೆಗಾಗಿ ತನ್ನ ಸ್ನೇಹಿತರಾದ ವಸಂತಕುಮಾರ, ಮಧುಸೂದನ್, ರವಿಚಂದ್ರ, ಚಂದ್ರ, ಸಿದ್ದರಾಜು ಎಂಬುವವರ ಜೊತೆಗೆ ಕಿರಣ್ ತೆರಳಿದ್ದನು. ಸಂಭ್ರಮಾಚರಣೆಯಲ್ಲಿ ಮಧ್ಯಪಾನ ಮಾಡುತ್ತಿದ್ದ ವೇಳೆ ವಸಂತನ ಮೊಬೈಲ್ಗೆ ಯುವತಿಯೊಬ್ಬಳು ಕರೆ ಮಾಡಿದ್ದಾಳೆ.
ಆ ಕರೆಯನ್ನು ಕಿರಣ್ ರಿಸೀವ್ ಮಾಡಿದ್ದರಿಂದ ಕೋಪಗೊಂಡ ವಸಂತ, ಕಿರಣ್ಗೆ ಥಳಿಸಿ ಹಲ್ಲೆ ನಡೆಸಿದ್ದಾನೆ. ಬೈಕ್ ಹರಿಸಿ ಕೊಲೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿಗಳು ಕಿರಣ್ ಅಪಘಾತವಾಗಿ ಗಾಯಗೊಂಡಿದ್ದಾನೆಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.