ಬೆಳಗಾವಿ : 30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ನೀಡಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಓಡಾಡ್ತಿದ್ದ ಕಾರು ಜಪ್ತಿ ಮಾಡಲಾಗಿದೆ.
1992-93ರಲ್ಲಿ ಚಿಕ್ಕೋಡಿಯ ದೂಧ್ಗಂಗಾ ನದಿಗೆ ಅಡ್ಡಲಾಗಿ ಗುತ್ತಿಗೆದಾರ ದಿ.ನಾರಾಯಣ ಗಣೇಶ ಕಾಮತ್ ಎಂಬವರು ಬ್ಯಾರೆಜ್ ನಿರ್ಮಾಣ ಮಾಡಿದ್ದರು. ಈ ವೇಳೆ ಬ್ಯಾರೆಜ್ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಸಿಮೆಂಟ್ ಪೂರೈಕೆ ಮಾಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ವಿಳಂಬ ಮಾಡಿದ್ದರು. ಇದರಿಂದ ಗುತ್ತಿಗೆದಾರ ಕಾಮತ್ ಅವರಿಗೆ ಬಹಳಷ್ಟು ಹಾನಿ ಆಗಿತ್ತು. ಅಲ್ಲದೇ, ಷರತ್ತುಬದ್ಧ ಗುತ್ತಿಗೆಯಲ್ಲಿ ಬಿಲ್ ಸಿಗದಿದ್ದಕ್ಕೆ ನೀರಾವರಿ ಇಲಾಖೆ ವಿರುದ್ಧ 1995ರಲ್ಲಿ ಗುತ್ತಿಗೆದಾರ ಕಾಮತ್ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ವೇಳೆ ಬೆಳಗಾವಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 34 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿತ್ತು. ಸ್ಥಳೀಯ ಕೋರ್ಟ್ ಆದೇಶ ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ 2024ರ ಜೂನ್ ಒಳಗಾಗಿ ಗುತ್ತಿಗೆದಾರನಿಗೆ ಬಡ್ಡಿ ಸಮೇತ ಅರ್ಧ ಬಿಲ್ ಪಾವತಿ ಮಾಡುವಂತೆ ಹೈಕೋರ್ಟ್ ಕೂಡ ಸೂಚನೆ ನೀಡಿತ್ತು.
ಬಳಿಕ ಈ ಆದೇಶದ ವಿರುದ್ಧ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ನಂತರ ಪ್ರಕರಣ ಮತ್ತೆ ಕೆಳ ಹಂತದ ನ್ಯಾಯಾಲಯಕ್ಕೆ ಬಂದಾಗ, ಗುತ್ತಿಗೆದಾರ ಕಾಮತ್ ಅವರಿಗೆ 11-8-1995ರಿಂದ ಶೇ. 9ರಷ್ಟು ಬಡ್ಡಿ ಸಮೇತ 1.31 ಕೋಟಿ ರೂ. ಪರಿಹಾರ ನೀಡುವಂತೆ 2024ರ ಜುಲೈ 31ರಂದು ಆದೇಶ ನೀಡಿತ್ತು. ಮೂರನೇ ಬಾರಿಗೆ ಮತ್ತೆ ಇದೇ ವರ್ಷ ಎಪ್ರಿಲ್ನಲ್ಲಿ ನ್ಯಾಯಾಲಯವು ಈ ಮೊತ್ತದ ಶೇ. 50ರಷ್ಟು ಪರಿಹಾರವನ್ನು ಜೂನ್ 2ರೊಳಗೆ ಪಾವತಿ ಮಾಡುವಂತೆ ತೀರ್ಪು ನೀಡಿತ್ತು. ಈ ಆದೇಶಕ್ಕೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ನೀರಾವರಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೂಡಲೇ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಈಗಲೂ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಪಾವತಿಸಲು ವಿಳಂಬ ಮಾಡಿದ್ದರಿಂದ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ನ್ಯಾಯವಾದಿ ಒ.ಬಿ. ಜೋಶಿ ಮಾಹಿತಿ ನೀಡಿದ್ದಾರೆ.