ಕೆಎನ್ಎನ್ಡಿಜಿಟಲ್ ಡೆಸ್ಕ್ : ನವದೆಹಲಿ: ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಾಲಾ ಅವರ ಹೆಸರಿನಲ್ಲಿ ಸಂದೇಶಗಳನ್ನ ಕಳುಹಿಸುವ ಮೂಲಕ, ಹಣವನ್ನ ವರ್ಗಾಯಿಸುವಂತೆ ಕೇಳಿ ವಂಚಕರು 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನ ವಂಚಿಸಿದ್ದಾರೆ ಎಂದು ಪುಣೆ ಪೊಲೀಸರನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿದೆ. ಬುಧವಾರ ಮಧ್ಯಾಹ್ನ ಮತ್ತು ಗುರುವಾರದ ನಡುವೆ ಈ ಘಟನೆ ನಡೆದಿದೆ ಎಂದು ಬುಂಡ್ಗಾರ್ಡನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಂಚನೆ ಮತ್ತು ಅಪರಾಧಗಳಿಗಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ವಂಚಕರು ಎಸ್ಐಐನ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆಗೆ ವಾಟ್ಸಾಪ್ ಸಂದೇಶವನ್ನ ಸಹ ಕಳುಹಿಸಿದ್ದಾರೆ, ಅವ್ರು ಅದಾರ್ ಪೂನಾವಾಲಾ ಅವರಂತೆ ನಟಿಸಿ ಕೆಲವು ಬ್ಯಾಂಕ್ ಖಾತೆಗಳಿಗೆ ತಕ್ಷಣವೇ ಹಣವನ್ನ ವರ್ಗಾಯಿಸುವಂತೆ ಕೇಳಿದ್ದಾರೆ.
ಸಿಇಒ ಅವರೇ ಮೆಸೇಜ್ ಮಾಡಿದ್ದಾರೆ ಎಂದು ನಂಬಿಸಿ ಕಂಪನಿಯ ಅಧಿಕಾರಿಗಳು 1,01,01,554 ರೂ.ಗಳ ಬೃಹತ್ ಮೊತ್ತವನ್ನ ಆನ್ ಲೈನ್ʼನಲ್ಲಿ ವರ್ಗಾಯಿಸಿದ್ದಾರೆ. ಆದಾಗ್ಯೂ, ಪೂನಾವಾಲಾ ವಾಟ್ಸಾಪ್ ಸಂದೇಶದ ಮೂಲಕ ಹಣವನ್ನು ಎಂದಿಗೂ ಕೇಳಿಲ್ಲ ಎಂದು ನಂತ್ರ ಅವ್ರು ಅರಿತುಕೊಂಡರು.
ಕಂಪನಿಯ ಫೈನಾನ್ಸ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವು ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿ, ಪೂನಾವಾಲಾ ಅಥವಾ ಇತರ ಅಧಿಕಾರಿಗಳಿಂದ ಈ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಪುಣೆಯಲ್ಲಿ ತನ್ನ ಪ್ರಧಾನ ಕಚೇರಿ ಮತ್ತು ಮ್ಯಾನಿಫ್ಯಾಕ್ಚರಿಂಗ್ ಘಟಕವನ್ನ ಹೊಂದಿರುವ ಎಸ್ಐಐ, ಕೊರೊನಾ ವೈರಸ್ ವಿರುದ್ಧ ಕೋವಿಶೀಲ್ಡ್ ಲಸಿಕೆಯನ್ನ ಅಭಿವೃದ್ಧಿಪಡಿಸಿದ ಭಾರತದ ಪ್ರಮುಖ ಲಸಿಕೆ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ಈಗ ಇತರ ಅನೇಕ ಕೋವಿಡ್ -19 ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.