ವ್ಯಾಪಾರಿ ಹಡಗುಗಳ ಮೇಲೆ ಯೆಮೆನ್‌ನ ಹೌತಿ ಬಂಡುಕೋರರಿಂದ ನಿರಂತರವಾಗಿ ದಾಳಿ ನಡೆಯುತ್ತಿರುವ ಹಿನ್ನೆಲೆ ತೈಲ ಪೂರೈಕೆಯ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಭಾರತ ಉಪಖಂಡದಲ್ಲಿ ಶೀಘ್ರವೇ ತೈಲ ಬೆಲೆ ಏರಿಕೆಯಾಗುವ ಸಂಭವವಿದೆ. ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲಿನ ದಾಳಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ವ್ಯಾಪಾರಕ್ಕೆ ಅಡಚಣೆ ಉಂಟು ಮಾಡುತ್ತಿದೆ. ಹಡಗುಗಳು ಸುರಕ್ಷಿತವಾಗಿ ಓಡಾಟ ನಡೆಸಲು ದಕ್ಷಿಣ ಆಫ್ರಿಕಾದ ಸುತ್ತಲೂ ಸುತ್ತಿ ಬರಲಾಗುತ್ತಿದ್ದು, ಸಾಗಣೆ ಸಮಯ 10- 15 ದಿನಗಳು ಹೆಚ್ಚಾಗುತ್ತಿದೆ. ಹೌತಿ ಬಂಡುಕೋರರಿಂದ ಕೆಂಪು ಸಮುದ್ರದಲ್ಲಿ ನಿರಂತರವಾಗಿ ಸಂಘರ್ಷಗಳು ನಡೆಯುತ್ತಿದ್ದು, ಇದರಿಂದಾಗಿ ವಿಶ್ವಾದ್ಯಂತ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವರ್ಲ್ಡ್ ಎಕನಾಮಿಕ್ ಫೋರಮ್ ಅಧ್ಯಕ್ಷರಾದ ಬೋರ್ಜ್ ಬ್ರೆಂಡೆ ಅವರ ಮಾಹಿತಿ ಅನುಸಾರ, ಈ ಪರಿಸ್ಥಿತಿಯು ಭಾರತದಂತಹ ತೈಲ ಆಮದುಗಳನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ ತೈಲ ಬೆಲೆಯಲ್ಲಿ $10-20 (₹820- ₹1640) ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹೆಚ್ಚಳವು ಭಾರತೀಯ ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆಯಾಗಿದೆ.

Share.
Exit mobile version